ಅ.1 ಕ್ಕೆ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ

 

 

ಮೈಸೂರು:25 ಸೆಪ್ಟೆಂಬರ್ 2021

ಸ್ಟೋರಿ ಬೈ : ನ@ದಿನಿ

                  ಕೈ ಬಿಸಿ ಕರೆಯುವ ಚಂದದ ಅರಮನೆ, ಕಣ್ಮನ ಸೆಳೆಯುವ ರತ್ನ ಖಚಿತ ಸಿಂಹಾಸನ.ರಾಜ ಮನೆತನದ ದರ್ಬಾರ್,10 ದಿನಗಳ ಕಾಲ ನಡೆಯುವ ದಸರಾ ಮಹೋತ್ಸವ, ಕೊನೆ ದಿನ ನಡೆಯುವ ಜಂಬೂಸವಾರಿ ವಿಶ್ವ ವಿಖ್ಯಾತಿ ಪಡೆದುಕೊಂಡಿದೆ.

                     ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆಯಲ್ಲಿ ಪಾರಂಪರಿಕ ದಸರಾ ಸಡಗರ ಸಂಭ್ರಮ ಮನೆ ಮಾಡಿದೆ. ಅರಮನೆಯ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನ ನಿಗದಿ ಮಾಡಲಾಗಿದ್ದು, ಅರಮನೆ ಕಾರ್ಯಕ್ರಮಗಳ ಪಟ್ಟಿ ಲಭ್ಯವಾಗಿದೆ.

                    ಅರಮನೆಯಲ್ಲಿ ಅಕ್ಟೋಬರ್ 1ಕ್ಕೆ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಂದು ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

                    ಅ 7 ರಿಂದ 14ರವರೆಗೂ ಅರಮನೆಯಲ್ಲಿ ದಸರಾ ಕಾರ್ಯಕ್ರಮ ನಡೆಯಲಿದ್ದು, ಅಕ್ಟೋಬರ್ 7 ರಿಂದ ಅಕ್ಟೋಬರ್ 15 ರವರೆಗೆ ಅರಮನೆಗೆ ಮಧ್ಯಾಹ್ನ 2.30ರವರೆಗೆ  ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

                    ಅಕ್ಟೋಬರ್ 7ರಿಂದ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನ ಏರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.


ಅ 14 ಅರಮನೆಯಲ್ಲಿ ಆಯುಧಪೂಜೆ  ನಡೆಯಲಿದ್ದು, ಬೆಳಗ್ಗೆ 5.30ರಿಂದ ಪೂಜಾ ವಿಧಿ ವಿಧಾನ ಆರಂಭವಾಗಲಿದೆ. ಬೆಳಿಗ್ಗೆ 7.45ಕ್ಕೆ ರಾಜರ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಮಾಡಿ, ನಂತರ ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣಮಂಟಪಕ್ಕೆ ತರಲಾಗುತ್ತದೆ.

                    ಬೆಳಿಗ್ಗೆ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪೂಜೆ ಸಲ್ಲಿಸಲಿದ್ದಾರೆ. ಆ. 15ರಂದು ಅರಮನೆಯಲ್ಲಿ ವಿಜಯದಶಮಿ ಆಚರಣೆ ನಡೆಯಲಿದೆ. ಅಂದು ಬೆಳಿಗ್ಗೆ 5.45ಕ್ಕೆ ಅರಮನೆ ಆನೆ ಕುದುರೆ ಹಸುಗಳು ಆಗಮಿಸಲಿದ್ದು, 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ ನೆರವೇರಲಿದೆ. 7.20ರಿಂದ 7.40ರವರೆಗೆ ವಿಜಯದಶಮಿ‌ ಮೆರವಣಿಗೆ ನಡೆಯಲಿದ್ದು, ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನಡೆಯಲಿದೆ. ಬಳಿಕ ದೇಗುಲದ ಬನ್ನಿ ಮರಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಲಿದ್ದಾರೆ. ನಂತರ ನಂತರ ಅಕ್ಟೋಬರ್ 31ರಂದು ಸಿಂಹಾಸನ ವಿಂಗಡಿಸಿ ಖಜಾನೆಗೆ ರವಾನೆ ಮಾಡಲಾಗುತ್ತದೆ ಅಂದು ಸಹ ಮಧ್ಯಾಹ್ನ 1.30ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ.

                    ಈ ಬಾರಿಯೂ ಕೊರೋನಾ ಹಿನ್ನೆಲೆ ಅರಮನೆ ಒಳಾಂಗಣದಲ್ಲಿ ನಡೆಯುತ್ತಿದ್ದ ಪಾರಂಪರಿಕ ಜಟ್ಟಿ‌ ಕಾಳಗ ರದ್ಧುಗೊಳಿಸಲಾಗಿದೆ. ಕಳೆದ ಬಾರಿಯೂ ಜಟ್ಟಿ ಕಾಳಗವನ್ನ ರದ್ಧುಗೊಳಿಸಲಾಗಿತ್ತು. ಅರಮನೆಯಿಂದ ಬನ್ನಿ ಮಂಟಪದವರೆಗೂ ಜಂಬೂಸವಾರಿ ಸಾಗುತ್ತಿತ್ತು.ಕೋರೋನಾ
ಮೂರನೇ ಅಲೆಯಿಂದ ಅಭಿಮನ್ಯು ತಂಡದ 8 ಆನೆಗಳು ಅರಮನೆ ಅಂಗಳದಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿವೆ.

Leave a Reply

Your email address will not be published. Required fields are marked *