ಮೋದಿಯವರ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನದಡಿಯಲ್ಲಿ ‘ಅಮೃತ ಕಲಶ ಯಾತ್ರೆ’ಗೆ ಚಾಲನೆ ನೀಡಿದ ಅಮಿತ್ ಶಾ

*ಮೋದಿಯವರ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನದಡಿಯಲ್ಲಿ ‘ಅಮೃತ ಕಲಶ ಯಾತ್ರೆ’ಗೆ ಚಾಲನೆ ನೀಡಿದ ಅಮಿತ್ ಶಾ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು ಶುಕ್ರವಾರ ದೇಶದ ರಾಜಧಾನಿ ದೆಹಲಿಯಲ್ಲಿ ‘ನನ್ನ ಮಣ್ಣು, ನನ್ನ ದೇಶ’ (ಮೇರಿ ಮಾಠಿ, ಮೇರಾ ದೇಶ್)’ ಅಭಿಯಾನದಡಿಯಲ್ಲಿ ‘ಅಮೃತ ಕಲಶ ಯಾತ್ರೆ’ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾ, ‘ಮೇರಿ ಮಾಠಿ, ಮೇರಾ ದೇಶ್’ ಕಾರ್ಯಕ್ರಮದ ‘ಮಣ್ಣಿಗೆ ಸೆಲ್ಯೂಟ್, ವೀರರಿಗೆ ಸೆಲ್ಯೂಟ್’ ಎಂಬ ಅಡಿಬರಹವೇ ಈ ಅಭಿಯಾನದ ಮಹತ್ವದ ಬಗ್ಗೆ ಹೇಳುತ್ತದೆ ಎಂದರು. ಭಾರತ ಮಾತೆಯನ್ನು ವಿಮೋಚನೆಗೊಳಿಸಲು ಸರ್ವಸ್ವವನ್ನು ತ್ಯಾಗ ಮಾಡಿದ ವೀರರಿಗೆ ನಮಿಸುವುದು ಮತ್ತು ಸ್ಮರಿಸುವುದು ಮಾತ್ರ ಈ ಕಾರ್ಯಕ್ರಮದ ಹಿಂದಿರುವ ಏಕೈಕ ಉದ್ದೇಶವಾಗಿದೆ. ಹಾಗೇ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿ ಲ್ಯಾಂಡಿಂಗ್ ಆದ ಚಂದ್ರಯಾನ-3 ಕುರಿತು ದೇಶವಾಸಿಗಳನ್ನು ಅಭಿನಂದಿಸಿದ ಶಾ ಇಂದು ಇದರ ಕುರಿತು ಪ್ರತಿಯೊಬ್ಬ ದೇಶವಾಸಿಯೂ ಹೆಮ್ಮೆ ಪಡುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರ ಸಮರ್ಥ ಮಾರ್ಗದರ್ಶನದಲ್ಲಿ, ‘ಹರ್ ಘರ್ ತಿರಂಗಾ’ ಅಭಿಯಾನದ ಯಶಸ್ಸಿನ ನಂತರ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರನ್ನು ಗೌರವಿಸಲು ‘ನನ್ನ ಮಣ್ಣು ನನ್ನ ದೇಶ’ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ಎಲೆಮರೆ ಕಾಯಿಯಂತಿದ್ದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಲು ಹೊಸ ದೃಷ್ಟಿಕೋನ ಲಭಿಸಲಿದೆ.

ಗ್ರಾಮ, ಪಂಚಾಯತ್, ಬ್ಲಾಕ್, ನಗರ ಸ್ಥಳೀಯ ಸಂಸ್ಥೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ‘ಸಾರ್ವಜನಿಕ ಭಾಗವಹಿಸುವಿಕೆ’ಯನ್ನು ಉತ್ತೇಜಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶ. ಈ ಅಭಿಯಾನದಡಿಯಲ್ಲಿಯೇ ದೇಶಾದ್ಯಂತ ‘ಅಮೃತ ಕಲಶ ಯಾತ್ರೆ’ಯನ್ನು ಕೂಡ ಆಯೋಜಿಸಲಾಗುವುದು. ದೇಶದ ಮೂಲೆ ಮೂಲೆಗಳಿಂದ ಮಣ್ಣು ಮತ್ತು ಗಿಡಗಳನ್ನು ಕಳಸಗಳಲ್ಲಿ ಹೊತ್ತ ‘ಅಮೃತ ಕಲಶ ಯಾತ್ರೆ’ ದೇಶದ ರಾಜಧಾನಿ ದೆಹಲಿಯಡೆಗೆ ಪ್ರಯಾಣ ಬೆಳೆಸಲಿದೆ. ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ಮಣ್ಣು ಮತ್ತು ಸಸ್ಯಗಳನ್ನು ಬೆರೆಸಿ ‘ಅಮೃತ ವಾಟಿಕಾ’ ರಚಿಸಲಾಗುವುದು, ಇದು ‘ಏಕ್ ಭಾರತ್-ಶ್ರೇಷ್ಠ ಭಾರತ’ದ ಸಂಕೇತವಾಗಲಿದೆ.

ಭವ್ಯ ಭಾರತವನ್ನು ರಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಐದು ಪ್ರತಿಜ್ಞೆಗಳಾದ ” ಅಭಿವೃದ್ಧಿ ಹೊಂದಿದ ಭಾರತದ ಗುರಿ, ಗುಲಾಮಗಿರಿಯ ಮನಸ್ಥಿತಿಯಿಂದ ಸ್ವಾತಂತ್ರ್ಯ, ನಮ್ಮ ಪರಂಪರೆ ಮತ್ತು ಸಂಪ್ರದಾಯಗಳ ಬಗ್ಗೆ ಹೆಮ್ಮೆ, ಏಕತೆ ಮತ್ತು ಸಮಗ್ರತೆಗಾಗಿ ನಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಡುವುದು ಮತ್ತು ನಾಗರಿಕರಲ್ಲಿ ಕರ್ತವ್ಯ ಪ್ರಜ್ಞೆಯನ್ನು ಬೆಳೆಸುವುದು”, ಇವುಗಳನ್ನು ಇಂದಿನ ಅಮೃತ ಕಾಲಘಟ್ಟದಲ್ಲಿ ಸಾಕಾರಗೊಳಿಸಲು ಕಠಿಣ ಪ್ರಯತ್ನವನ್ನು ಮಾಡಲಾಗುತ್ತಿದೆ. ಪ್ರತಿ ಕುಟುಂಬ, ಪ್ರತಿ ವ್ಯಕ್ತಿ, ಪ್ರತಿ ಯುವಕ, ಪ್ರತಿ ಮಗು ಭವ್ಯ ಭಾರತದ ನಿರ್ಮಾಣದಲ್ಲಿ ಸಮರ್ಪಣಾ ಭಾವದಿಂದ ಕೊಡುಗೆ ನೀಡಬಹುದಾದಂತಹ ಕಾರ್ಯಕ್ರಮ ‘ಮೇರಿ ಮಾಠಿ, ಮೇರಾ ದೇಶ್’. ಇಂತಹ ಕಾರ್ಯಕ್ರಮದ ಕಲ್ಪನೆಯನ್ನು ಮನಸ್ಸಿನಲ್ಲಿ ಕೇವಲ ದೇಶಭಕ್ತಿಯನ್ನು ಹೊಂದಿರುವ ಮೋದಿ-ಶಾ ಜೋಡಿಯಿಂದ ಮಾತ್ರ ನಿರೀಕ್ಷಿಸಲು ಸಾಧ್ಯ.

Leave a Reply

Your email address will not be published. Required fields are marked *