ಮಂಗಳೂರಿಗೆ ಸೋಲುಣಿಸಿದ ಬೆಂಗಳೂರು

ನಂದಿನಿ ಮೈಸೂರು

ಎಲ್‌.ಆರ್‌. ಚೇತನ್‌ (66) ಅವರ ಸ್ಪೋಟಕ ಬ್ಯಾಟಿಂಗ್‌ ಹಾಗೂ ರಿಶಿ ಬೋಪಣ್ಣ (19ಕ್ಕೆ 4) ಅವರ ಸ್ಪಿನ್‌ ಮಂತ್ರದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮಂಗಳೂರು ಯುನೈಟೆಡ್‌ ವಿರುದ್ಧದ ಪಂದ್ಯದಲ್ಲಿ ವಿಜೆಡಿ ನಿಯಮಾನುಸಾರ 35 ರನ್‌ಗಳ ಅಂತರದಲ್ಲಿ ಜಯ ಗಳಿಸಿದೆ.

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರಿಕೆಟ್‌ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್‌ 9 ವಿಕೆಟ್‌ 186 ರನ್‌ಗಳ ಬೃಹತ್‌ ಮೊತ್ತ ಗಳಿಸಿತ್ತು. ಕಠಿಣ ಸವಾಲನ್ನು ಬೆಂಬತ್ತಿದ ಮಂಗಳೂರು ಯುನೈಟೆಡ್‌ 17.4 ಓವರ್‌ಗಳಲ್ಲಿ 129 ರನ್‌ ಗಳಿಸಿ ಸೋಲಿನ ಅಂಚಿಗೆ ಸಿಲುಕಿತ್ತು. ಆ ಸಂದರ್ಭದಲ್ಲಿ ಪಂದ್ಯಕ್ಕೆ ಮಳೆಯ ಅಡ್ಡಿಯಾದ ಕಾರಣ 17.4 ಓವರ್‌ಗಳಲ್ಲಿ 165 ರನ್‌ ಗುರಿ ನಿರ್ಧರಿಸಲಾಯಿತು. ಆದರೆ ಮಂಗಳೂರು ಯುನೈಟೆಡ್‌ ಈ ಹಂತದಲ್ಲಿ ಕೇಲವ 129 ರನ್‌ ಗಳಿಸಿದ್ದರಿಂದ ಬೆಂಗಳೂರು ಬ್ಲಾಸ್ಟರ್ಸ್‌ 35 ರನ್‌ ಅಂತರದಲ್ಲಿ ವಿಜಯೀ ಎಂದು ಘೋಷಿಸಲಾಯಿತು. ಬೆಂಗಳೂರು ಬ್ಲಾಸ್ಟರ್ಸ್‌ನ ಚೇತನ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ತಂಡದ ನಿಕಿನ್‌ ಜೋಸ್‌ (35) ಹಾಗೂ ಮೆಕ್‌ನೈಲ್‌ ನೊರೊನ್ಹಾ (50) 70 ರನ್‌ ಜೊತೆಯಾಟವಾಡಿದ್ದನ್ನು ಹೊರತುಪಡಿಸಿದರೆ ಉಳಿದ ಆಟಗಾರರು ಪೆವಿಲಿಯನ್‌ ಪೆರೇಡ್‌ ನಡೆಸಿದರು.

ಬೆಂಗಳೂರಿನ ಬೃಹತ್‌ ಮೊತ್ತ: ಟಾಸ್‌ ಗೆದ್ದ ಮಂಗಳೂರು ಯುನೈಟೆಡ್‌ ಫೀಲ್ಡಿಂಗ್‌ ಆಯ್ದುಕೊಂಡಿತು. ಆರಂಭದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಮಳೆ ನಿಂತ ಬಳಿಕ ಮಯಾಂಕ್‌ ಅಗರ್ವಾಲ್ ‌ಮತ್ತು ಎಲ್‌ ಆರ್‌ ಚೇತನ್‌ ರನ್‌ ಮಳೆಗರೆದರು. ಟಾಸ್‌ ಗೆದ್ದು ತಪ್ಪು ನಿರ್ಧಾರ ಕೈಗೊಂಡೆವೋ ಎಂದು ಒಂದು ಹಂತದಲ್ಲಿ ನಾಯಕ ಸಮರ್ಥ್‌ಗೆ ಅನಿಸದಿರದು. ಏಕೆಂದರೆ 40 ಎಸೆತಗಳಲ್ಲಿ ಈ ಇಬ್ಬರು ಆಟಗಾರರು 73 ರನ್‌ ಗಳಿಸಿ ಬೃಹತ್‌ ಮೊತ್ತಕ್ಕೆ ವೇದಿಕೆ ಹಾಕಿದ್ದರು. ಮಯಾಂಕ್‌ 20 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ ಮಿಂಚಿನ 44 ರನ್‌ ಸಿಡಿಸಿದ್ದರು. ಆದರೆ ರೋಹಿತ್‌ ತಮ್ಮ ಮೊದಲ ಓವರ್‌ನಲ್ಲಿ ಮಯಾಂಕ್‌ ಅವರನ್ನು ಔಟ್‌ ಮಾಡುವ ಮೂಲಕ ಉತ್ತಮ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು.

ಆದರೆ ಎಲ್‌.ಆರ್‌. ಚೇತನ್‌ ಅಬ್ಬರದ ಆಟವನ್ನು ಮುಂದುವರಿಸಿ ಮಂಗಳೂರಿನ ಬೃಹತ್‌ ಮೊತ್ತಕ್ಕೆ ಹಾದಿ ತೋರಿದರು. ಕೇವಲ 39 ಎಸೆತಗಳನ್ನು ಎದುರಿಸಿದ ಚೇತನ್‌, 4 ಬೌಂಡರಿ ಹಾಗೂ 5 ಸಿಕ್ಸರ್‌ ಸಿಡಿಸಿ 66 ರನ್‌ಗಳ ಬೃಹತ್‌ ಕೊಡುಗೆ ನೀಡಿದರು. ಆದರೆ ಅನುಭವಿ ಬೌಲರ್‌ ಅಮಿತ್‌ ವರ್ಮಾ ಅವರು ಚೇತನ್‌ ಅವರ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು. ಚೇತನ್‌ ಹಾಗೂ ಅನೀಶ್‌ 53 ರನ್‌ಗಳ ಜೊತೆಯಾಟವಾಡಿದರು.
ಮೊದಲ ಪಂದ್ಯದಲ್ಲೇ ಅನೀಶ್ವರ್‌ ಮಿಂಚು:
ಕಿರಿಯರ ವಿಶ್ವಕಪ್‌ ವಿಜೇತ ಭಾರತ ತಂಡದ ಆಟಗಾರ ಅನೀಶ್ವರ್‌ ಗೌತಮ್‌ ಮೊದಲ ಓವರ್‌ನಲ್ಲೇ 2 ವಿಕೆಟ್‌ ಗಳಿಸಿ ಬೆಂಗಳೂರಿನ ಮಧ್ಯಮಕ್ರಮಾಂಕದ ಆಟಗಾರರ ರನ್‌ ಗಳಿಕೆಗೆ ಕಡಿವಾಣ ಹಾಕಿದರು. ಆದರೆ ಮಯಾಂಕ್‌ ಹಾಗೂ ಚೇತನ್‌ ಮಂಗಳೂರಿಗೆ ಸವಾಲಿನ ಮೊತ್ತ ನೀಡುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿದರೆ ಬೆಂಗಳೂರಿನ ಇತರ ಆಟಗಾರರು ಮಂಗಳೂರಿನ ಬೌಲಿಂಗ್‌ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಬೆಂಗಳೂರು 9 ವಿಕೆಟ್‌ ನಷ್ಟಕ್ಕೆ 186 ರನ್‌ಗಳ ಕಠಿಣ ಸವಾಲನ್ನು ಮಂಗಳೂರಿಗೆ ನೀಡಿತು.
ಮಂಗಳೂರು ಯುನೈಟೆಡ್‌ ಪರ ಅನೀಶ್ವರ್‌ ಗೌತಮ್‌, ವೆಂಕಟೇಶ್‌ ಹಾಗೂ ಅಮಿತ್‌ ವರ್ಮಾ ತಲಾ ಎರಡು ವಿಕೆಟ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌:
ಬೆಂಗಳೂರು ಬ್ಲಾಸ್ಟರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 186 (ಮಯಾಂಕ್‌ ಅಗರ್ವಾಲ್‌ 44, ಚೇತನ್‌ 66, ರಿಶಿ ಬೋಪಣ್ಣ 16* ಅಮಿತ್‌ ವರ್ಮಾ, 27ಕ್ಕೆ 2, ಅನೀಶ್ವರ್‌ ಗೌತಮ್‌ 18ಕ್ಕೆ 2, ವೆಂಕಟೇಶ್‌ 41ಕ್ಕೆ 2)
ಮಂಗಳೂರು ಯುನೈಟೆಡ್‌: 17.4 ಓವರ್‌ಗಳಲ್ಲಿ 7 ವಿಕೆಟ್‌ಗೆ 129 ರನ್‌, (ಮೆಕ್‌ನೈಲ್‌ ನೊರೊನ್ಹಾ, 50, ನಿಕಿನ್‌ ಜೋಸ್‌ 35, ರಿಶಿ ಬೋಪಣ್ಣ 19ಕ್ಕೆ 4)

Leave a Reply

Your email address will not be published. Required fields are marked *