ಸದಸ್ಯರಿಗೆ ಗುರುತಿನ ಚೀಟಿ, ಈ ಶ್ರಮ್ ಕಾರ್ಡ್ ವಿತರಣೆ

ಪಿರಿಯಾಪಟ್ಟಣ:22 ಆಗಸ್ಟ್ 2022

ಸತೀಶ್ ಆರಾಧ್ಯ/ ನಂದಿನಿ ಮೈಸೂರು

ದೇಶದಲ್ಲಿನ ಕಾರ್ಮಿಕರ ದುಸ್ಥಿತಿ ಬದಲಾಗಬೇಕಾದರೆ ಸಂವಿಧಾನದಲ್ಲಿ ಕಾರ್ಮಿಕ ವಿಧೇಯಕಗಳ ತಿದ್ದುಪಡಿ ಅಗತ್ಯವಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ ವಿಜಯ್ ಕುಮಾರ್ ಹೇಳಿದರು.

ಪಟ್ಟಣದ ಶ್ರೀ ಕಾಳಿಕಾಂಬ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ವಿಶ್ವ ಕಾರ್ಮಿಕರ ಸಂಘ ವತಿಯಿಂದ ನಡೆದ ಸಂಘದ ಸದಸ್ಯರಿಗೆ ಗುರುತಿನ ಚೀಟಿ ಮತ್ತು ಈ ಶ್ರಮ್ ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಅತಿ ಹೆಚ್ಚು ಕಾರ್ಮಿಕರಿರುವ ದೇಶದಲ್ಲಿ ಕಾರ್ಮಿಕರ ನೋಂದಾವಣಿಯಾಗದೆ ಕಲ್ಯಾಣ ಮಂಡಳಿ ನಿಧಿಯ ಹಣ ಶೇ.25 ಮಾತ್ರ ಬಳಕೆಯಾಗಿ ಶೇ.75 ರಷ್ಟು ಹಣ ಬಳಕೆಯಾಗದಿರುವುದು ವಿಷಾದಕರ, ಕಾರ್ಮಿಕ ಇಲಾಖೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ ಇರುವುದರ ಜತೆಗೆ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ, ಕಾರ್ಮಿಕ ಕಲ್ಯಾಣ ನಿಧಿಯ ಸದುಪಯೋಗಕ್ಕೆ ಸಂವಿಧಾತ್ಮಕವಾಗಿ ಯಾವುದೇ ಹಿಡಿತವಿಲ್ಲದಿರುವ ಕಾರಣ ಇದರ ಬಗ್ಗೆ ಕೆಲವೊಂದು ಬದಲಾವಣೆ ಅತ್ಯವಶ್ಯಕ, ಕಾರ್ಮಿಕ ಇಲಾಖೆ ವತಿಯಿಂದ ಸರ್ಕಾರದ ಯೋಜನೆಗಳು ಹಾಗು ಕಾರ್ಮಿಕರಿಗೆ ದೊರೆಯುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕು ಎಂದರು.  

ಸಂಘದ ಜಿಲ್ಲಾಧ್ಯಕ್ಷ ಎನ್.ನಂದಕುಮಾರ್ ಅವರು ಮಾತನಾಡಿ ಕಾರ್ಮಿಕರ ನೆರವಿಗಾಗಿ ಸರ್ಕಾರದಿಂದ ದೊರೆಯುತ್ತಿರುವ ಸವಲತ್ತುಗಳನ್ನು ಸಂಘದ ಮೂಲಕ ಕಾರ್ಮಿಕರಿಗೆ ಮಾಹಿತಿ ನೀಡಿ ತಲುಪಿಸುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿರುನೀಲಕಂಠ ಅವರು ಮಾತನಾಡಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸಂಘ ರಚಿಸಿಕೊಂಡು ಸರ್ಕಾರದಿಂದ ದೊರೆಯುತ್ತಿರುವ ಸವಲತ್ತುಗಳನ್ನು ವಿತರಿಸಲಾಗುತ್ತಿದೆ ಎಂದರು. 

ಈ ವೇಳೆ ಸಂಘದ ಸದಸ್ಯರಿಗೆ ಗುರುತಿನ ಚೀಟಿ ಹಾಗೂ ಈ ಶ್ರಮ್ ಕಾರ್ಡ್ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ವಿಶ್ವಕರ್ಮ ಟ್ರಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಂಡಗಣ್ಣ, ಸಂಘದ ತಾಲ್ಲೂಕು ಅಧ್ಯಕ್ಷ ನಂದಕುಮಾರ್, ಉಪಾಧ್ಯಕ್ಷ ಶಿವರಾಮೇಗೌಡ, ಖಜಾಂಚಿ ಕೆ.ಎಸ್ ಯೋಗೇಶ್, ಪ್ರಧಾನ ಕಾರ್ಯದರ್ಶಿ ಬಿ.ಎಸ್ ಹಿರಣ್ಣಯ್ಯ, ಪುರಸಭಾ ಸದಸ್ಯ ರವಿ, ಮಾಜಿ ಸದಸ್ಯ ಅಶೋಕ್ ಕುಮಾರ್ ಗೌಡ, ಗ್ರಾ.ಪಂ ಮಾಜಿ ಸದಸ್ಯ ಭೂತನಹಳ್ಳಿ ರವಿ, ದರ್ಶನ್ ಅಭಿಮಾನಿ ಸಂಘದ ತಾಲ್ಲೂಕು ಅಧ್ಯಕ್ಷ ಮಂಜು ಸದಸ್ಯರಾದ ಜಯಣ್ಣ, ಗೌರೀಶ್ ಮತ್ತು ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *