ದಸರಾ ಗಜಪಡೆಗೆ ಮೊದಲ ಫಿರಂಗಿ ಕುಶಾಲತೋಪು ತಾಲೀಮು,ಸಿಡಿಮದ್ದಿಗೆ ಬೆದರಿದ ಆನೆ,ಕುದುರೆಗಳು

 

ಮೈಸೂರು:30 ಸೆಪ್ಟೆಂಬರ್ 2021

ನ@ದಿನಿ 

                     ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2021 ವಿಜಯ ದಶಮಿಯಂದು ಸಿಡಿಸುವ ಸಿಡಿ ಮದ್ದಿಗೆ ಬೆದರದಂತೆ   ಗಜಪಡೆ ಹಾಗೂ ಅಶ್ವದಳಕ್ಕೆ ಇಂದು ಮೊದಲ ಫಿರಂಗಿ ಕುಶಾಲತೋಪು ತಾಲೀಮು ನಡೆಯಿತು.

                       ಅರಮನೆ ಹೊರ ಆವರಣದಲ್ಲಿರುವ ಕೋಟೆ ಮಾರಮ್ಮನವರ ದೇಗುಲದ ಬಳಿ ನಡೆದ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಯಿತು.  7 ಫಿರಂಗಿ ಗಾಡಿಗಳಿಂದ‌ 21 ಕುಶಾಲತೋಪುಗಳನ್ನು  ಸಿ ಎ ಆರ್ ಸಿಬ್ಬಂದಿಗಳು ಸಿಡಿಸಿದರು. ಕುಶಾಲ‌ ತೋಪಿನ ಸದ್ದಿಗೆ ಅಶ್ವತ್ಥಾಮ,ಗೋಪಾಲಸ್ವಾಮಿ, ಲಕ್ಷ್ಮಿ ಮತ್ತು ಆನೆಗಳು ಗಾಬರಿಗೊಂಡು ವಿಚಲಿತಗೊಂಡಿವೆ.

                         ಇದೇ ಮೊದಲ ಬಾರಿ ದಸರಾ ಮಹೋತ್ಸವಕ್ಕೆ ಆಗಮಿಸಿರುವ ಅಶ್ವತ್ಥಾಮ ಹಾಗೂ ಲಕ್ಷ್ಮಿ ಆನೆಗಳು ಬೆಚ್ಚಿದೆ. ಉಳಿದೆಲ್ಲಾ ಆನೆಗಳು ಧೈರ್ಯ ಪ್ರದರ್ಶಿಸಿವೆ. ಇದೇ ವೇಳೆ ಕೆಲ ಅಶ್ವಗಳು ವಿಚಲಿತಗೊಂಡವು. ಕುಶಾಲತೋಪುಗಳನ್ನು ಸಿಡಿಸುವ ಇಂದಿನ ಮೊದಲ ತಾಲೀಮು ಯಶಸ್ವಿಯಾಗಿದೆ.ಡಿಸಿಎಫ್ ಕರಿಕಾಳನ್, ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ನೇತೃತ್ವದಲ್ಲಿ  ತಾಲೀಮು ನಡೆಯಿತು.

               ಜಂಬೂ ಸವಾರಿ ಮೆರವಣಿಗೆಗೆ ಮುನ್ನ ಒಟ್ಟು ಮೂರು ಬಾರಿ ಕುಶಾಲತೋಪುಗಳನ್ನು ಸಿಡಿಸುವ ತಾಲೀಮನ್ನು ಸಿಎಆರ್ ಸಿಬ್ಬಂದಿಗಳು ನಡೆಸುತ್ತಾರೆ. ಮತ್ತೆರಡು ಬಾರಿ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಯಲಿದೆ. ಆನೆಗಳು, ಅಶ್ವಗಳು ಬೆದರದಂತೆ ಸಕಲ ಸಿದ್ದತೆ ನಡೆಸಲಾಗಿದೆ. ವಿಜಯದಶಮಿ ಜಂಬೂಸವಾರಿ ಮೆರವಣಿಗೆಯ ದಿನ ರಾಷ್ಟ್ರಗೀತೆ ನುಡಿಸುವ ವೇಳೆ 21 ಬಾರಿ ಕುಶಾಲತೋಪುಗಳನ್ನು ಸಿಡಿಸಿ ಗೌರವ ಸಲ್ಲಿಸಲು ಪೂರ್ವ ಸಿದ್ದತೆ ನಡೆಯುತ್ತಿದೆ. ನಾಳೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುತ್ತಿದೆ. ಈಗಾಗಲೇ ದಸರಾ ಗಜಪಡೆಯ ಮೂರು‌ ಆನೆಗಳಿಗೆ ತೂಕ ಹೊರುವ ತಾಲೀಮು ಪ್ರಗತಿಯಲ್ಲಿದೆ. ಸಾವಿರ ಕೆಜಿವರೆಗೂ ತೂಕ ಹೊರಿಸಿ ತಾಲೀಮು ನಡೆಸಲಾಗುವುದು.

                 ಜಂಬೂ ಸವಾರಿಗೂ ಮುನ್ನ ರಾಷ್ಟ್ರಗೀತೆ ಕೇಳಿ ಬರುವ 53ಸೆಕೆಂಡುಗಳಲ್ಲಿ 21ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ ನಾಲ್ಕು ಲಾಂಗ್ ಬ್ಯಾರೆಲ್ ಹಾಗೂ ಮೂರು ಶಾರ್ಟ್ ಬ್ಯಾರೆಲ್ ಫಿರಂಗಿಗಳ ಮೂಲಕ ಒಟ್ಟು 21ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ. ಆ ವೇಳೆ ಆನೆಗಳು ಹಾಗೂ ಕುದುರೆಗಳು ಬೆದರಬಾರದೆಂಬ ಕಾರಣಕ್ಕೆ  ಜಂಬೂಸವಾರಿಗೂ ಮುನ್ನ ಮೂರು ಬಾರಿ ತಾಲೀಮು ನಡೆಸಲಾಗುತ್ತದೆ. ಇದು ಅತ್ಯಂತ ಕಠಿಣ ಹಾಗೂ ಸವಾಲಿನ ಸಮಯವಾಗಿದ್ದು, ಬ್ಯಾರೆಲ್ ಒಳಗೆ ಒಂದು ಸಣ್ಣ ಕಿಡಿ ಉಳಿದುಕೊಂಡರೂ ಗನ್ ಪೌಡರ್ ಹಾಕಿದ ತಕ್ಷಣವೇ ಸ್ಪೋಟಗೊಳ್ಳುವ ಸಂಭವವಿರುವುದರಿಂದ ಭಾಗವಹಿಸುವ ಎಲ್ಲ ಸಿಬ್ಬಂದಿಗೂ ನಗರ ಸಶಸ್ತ್ರ ಮೀಸಲು ದಳ ವಿಶೇಷ ವಿಮೆ ಮಾಡಿಸಿದೆ.

                 ಗನ್ ಪೌಡರ್ ಸಿಡಿದ ನಂತರ ಬ್ಯಾರೆಲ್ ಗೆ ತೂರಿಸಿ ಬೆಂಕಿ ಕಿಡಿ ಹಾಗೂ ಮದ್ದಿನ ಚೂರನ್ನು ಸ್ವಚ್ಛಗೊಳಿಸುವುದು ಹಾಗೂ ಮದ್ದು ತುಂಬಿದ ಚೀಲವನ್ನು ಹೆಗಲಿಗೆ ಹಾಕಿಕೊಂಡು ಫಿರಂಗಿ ಪಾಯಿಂಟ್ ಗೆ ಇಡುವ ಕೆಲಸ ಅತಿ ಮಹತ್ವದ್ದಾಗಿದೆ.

Leave a Reply

Your email address will not be published. Required fields are marked *