ಪ್ರಜಾಪ್ರಭುತ್ವದ ಸಾಕಾರಕ್ಕೆ ದೇವರಾಜ ಅರಸರ ಆಡಳಿತ ಮಾದರಿ: ಡಾ.ಹೆಚ್.ಸಿ.ಮಹದೇವಪ್ಪ

ನಂದಿನಿ ಮೈಸೂರು

*ಪ್ರಜಾಪ್ರಭುತ್ವದ ಸಾಕಾರಕ್ಕೆ ದೇವರಾಜ ಅರಸರ ಆಡಳಿತ ಮಾದರಿ: ಡಾ.ಹೆಚ್.ಸಿ.ಮಹದೇವಪ್ಪ*

ಮೈಸೂರು,ಆ.20: ಯಾವುದೇ ಜಾತಿ ಹಾಗೂ ಹಣದ ಬೆಂಬಲವಿಲ್ಲದೆ ಪ್ರಜಾಪ್ರಭುತ್ವವನ್ನು ಅನುಷ್ಠಾನಗೊಳಿಸಿ ದೇಶ ಮುನ್ನಡೆಸುವುದನ್ನು ದೇವರಾಜ ಅರಸು ತಮ್ಮ ಆಡಳಿತದ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸರ 108ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಅರಸು ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಚಿವರು ಮಾತನಾಡಿದರು.

ಭಾರತದ ರಾಜಕೀಯ ಇಂದು ಜಾತಿ, ಹಣದ ಮೇಲೆ ನಿಂತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿ, ಗೊಂದಲ ಸೃಷ್ಟಿ ಮಾಡಿ, ಸಂವಿಧಾನದ ಆಶಯಗಳಿಗೆ ಭಂಗ ಉಂಟುಮಾಡುತ್ತಿರುವ ಸಂದರ್ಭದಲ್ಲಿ
ರಾಜಕೀಯ ಅಧಿಕಾರಿವು ಹಣ ಮತ್ತು ಜಾತಿ ಬಲವುಳ್ಳವರ ಕೈಗೆ ಸಿಗದಂತೆ ಎಚ್ಚರವಹಿಸಬೇಕು ಎಂದು ಸಂದೇಶ ನೀಡಿದರು.

ದೇಶದ ಬೆನ್ನೆಲುಬಾದ ರೈತರ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅರಸರು, ಗ್ರಾಮೀಣ ಬದುಕಿನ ಎಲ್ಲಾ ಮಜಲುಗಳನ್ನು ಅರ್ಥಮಾಡಿಕೊಂಡಿದ್ದರು. ಸಾಮಾಜಿಕ ಹೋರಾಟ, ಸಂಘರ್ಷ, ಸ್ವಾತಂತ್ರ್ಯ ಚಳುವಳಿಯೊಂದಿಗೆ ಜನಸಾಮಾನ್ಯರ ಜೊತೆ ಬದುಕಿದ ಅನುಭವಗಳು ಅವರನ್ನು ಸಹಜವಾಗಿ ಮುತ್ಸದ್ಧಿ ಪರಿವರ್ತಿಸಿತು. ಅವರು ಮುಂದಿನ ಜನಾಂಗದ ಭವಿಷ್ಯದ ಬಗ್ಗೆ ಚಿಂತಿಸಿ ಸಾಮಾಜಿಕ ಬದುಕುಗಳ ಸ್ಥೂಲ ಪರಿಚಯದಿಂದ ಅನೇಕ ಬದಲಾವಣೆ ತಂದರು. ಅವರನ್ನು ರಾಜಕಾರಣಿ ಎನ್ನುವುದಕ್ಕಿಂತ ಅವರೊಬ್ಬರು ಸಮಾಜ ಸುಧಾರಕ, ಸಾಮಾಜಿಕ ಚಿಂತಕ, ಸಮಾಜಶಾಸ್ತ್ರದ ಶ್ರೇಷ್ಠ ವೈದ್ಯರು ಎಂದು ಹೇಳಿದರು.

ಚಲನೆ ಇಲ್ಲದ ಸಮಾಜಕ್ಕೆ ಚಲನಶೀಲತೆಯನ್ನು ಉಂಟುಮಾಡಿ ಅಲೆ ಹೆಬ್ಬಿಸಿದರು. ಬಹಳಷ್ಟು ಸವಾಲುಗಳು ಎದುರಾದರೂ ಹವನೂರ ವರದಿ ಜಾರಿ ಮಾಡುವ ಮೂಲಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿ ಮಾಡಿದರು. ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಮುಕ್ತ ಅವಕಾಶ ನೀಡಿದರು‌. ಹೀಗಾಗಿ ಅವರು ರಾಜ್ಯದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಹೇಳಿದರು.

ಅರಸರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಶೋಷಣೆಗೆ ಒಳಗಾದ ಜನರ ಬದುಕನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬದಲಾವಣೆ ತರುವಂಥ ಐತಿಹಾಸಿಕ ನಿರ್ಧಾರಗಳನ್ನು ಮಾಡಿದರು. ಉಳುವವನೆ ಹೊಲದೊಡೆಯ, ಮಲಹೊರುವ ಹೊರುವ ಪದ್ದತಿ ನಿರ್ಮೂಲನೆ, ಇಪ್ಪತ್ತು ಅಂಶಗಳ ಕಾರ್ಯಕ್ರಮ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ನಿಗಮವನ್ನು ಸ್ಥಾಪಿಸಿಸುವ ಮ‌ೂಲಕ ಬಡವರ ಬದುಕನ್ನು ರೂಪಿಸಿದರು ಎಂದರು.

ಗುಣಾತ್ಮಕ ರಾಜಕೀಯ ನಾಯಕತ್ವ ಸೃಷ್ಟಿಮಾಡಿ ನೊಂದ ಜನರಿಗೆ, ಶೋಷಿತರಿಗೆ, ಎಲ್ಲಾ ಸಮುದಾಯದ ಬಡವರಿಗೆ ಅವರ ಆಡಳಿತ ಸ್ಮರಣೀಯವಾಗಿದೆ‌. ಅವರು ಬದುಕಿರುವರೆಗೂ ನಿರಂತರವಾಗಿ ಹುಣಸೂರು ಕ್ಷೇತ್ರದಲ್ಲಿ ಜಯಗಳಿಸುತ್ತಾ ಬಂದರು. ಅಂತಹ ವಾತಾವರಣ ದೇಶದಲ್ಲಿ, ರಾಜ್ಯದಲ್ಲಿ ಮರುಕಳಿಸದಿದ್ದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿ, ಸಂವಿಧಾನ ಗಂಡಾಂತರ ಒದಗುತ್ತದೆ ಎಂದು ಹೇಳಿದರು.

ದೇವರಾಜ ಅರಸರ ಆಡಳಿತ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ನಮ್ಮ ಸರ್ಕಾರದ ಆಡಳಿತ ಒಂದೇ ರೀತಿಯಲ್ಲಿದೆ. ಅವರ ದಾರಿಯಲ್ಲೇ ನಾವು ಸಾಗುತ್ತಿದ್ದೇವೆ. ನಮ್ಮ ಯುವಕರು ಜಾತ್ಯಾತೀತ, ಪ್ರಜಾಪ್ರಭುತ್ವ, ಸಂವಿಧಾನ ಬದ್ದ ನಡವಳಿಕೆ ಮೂಲಕ ಸ್ವಾತಂತ್ರ್ಯ ಉದ್ದೇಶ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಾಪೌರರಾದ ಶಿವಕುಮಾರ್, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮರಿತಿಬ್ಬೇಗೌಡ, ಉಪಮಹಾಪೌರರಾದ ಡಾ.ಜಿ.ರೂಪ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *