ನಂದಿನಿ ಮನುಪ್ರಸಾದ್ ನಾಯಕ್
ಭಾರತ ಮಾತೆಯ ಋಣ ತೀರಿಸಲು ಸರ್ಕಾರದಿಂದ ತಾಯಿಯಂದಿರ ದಿನಾಚರಣೆ ಆಚರಿಸಬೇಕು ಎಂದು ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸನ್ ಮನವಿ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ವಿಶ್ವ ಅಮ್ಮನ ದಿನಾಚರಣೆ ಅಂಗವಾಗಿ ವಾಸುದೇವ ಮಹಾರಾಜ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಮಾತಾ ವಿಜಯಕುಮಾರಿ ವಿ.ರಾವ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜಗತ್ತಿನಲ್ಲಿ ಬೆಲೆ ಕಟ್ಟಲಾಗದು, ಪ್ರೀತಿ ಸಿಗುವುದು ತಾಯಿಯಿಂದ ಮಾತ್ರ ಎಂದರು.
ತಾಯಿಯೇ ಮೊದಲ ಗುರು ಎಂಬುದು ನಿಜವಾದ ಮಾತು. ಅದರಂತೆ ಭಾರತ ಮಾತೆಯೂ ನಮ್ಮ ತಾಯಿ ಆಗಿದ್ದು, ಈ ದಿನಾಚರಣೆ ಮಾಡುತ್ತೇವೆ ಎಂದರೆ ಅದು ಭಾರತ ಮಾತೆಯನ್ನು ಪೂಜಿಸಿದ್ದಂತೆ. ಆದ್ದರಿಂದ ಭೂಮಿ ತಾಯಿಯ ಖುಣ ತೀರಿಸಲು ಸರ್ಕಾರದಿಂದ ತಾಯಿ ದಿನಾಚರಣೆಯನ್ನು ಆಚರಿಸಬೇಕು. ಇದರಿಂದ ಭಾರತ ಮಾತೆಯ ಋಣ ತೀರಿಸದಂತೆ ಆಗಲಿದೆ ಎಂದು ತಿಳಿಸಿದರು.
ಸಂಸ್ಕೃತ ವಿದುಷಿ ಡಾ.ಕೆ. ಲೀಲಾ ಪ್ರಕಾಶ್ ಮಾತನಾಡಿ, ದೇವರು ಎಲ್ಲಾ ಕಡೆ ತಾನು ಇರಲು ಸಾಧ್ಯವಿಲ್ಲ ಎಂದು ತಾಯಿಯನ್ನು ಸೃಷ್ಟಿಸಿದ್ದಾನೆ. ತಾಯಿ ಸಾಮಾನ್ಯಳಲ್ಲ, ಆಕೆ ಭುವನದ ಭಾಗ್ಯ. ಆಕೆಯನ್ನು ಸ್ಮರಿಸುವ ಮೂಲಕ ಸಾಧಕ ಮಹಿಳೆಯರಿಗೆ ಪ್ರಶಸ್ತಿ ನೀಡುತ್ತಿರುವ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಲೇಖಕಿ ಲಕ್ಷ್ಮಿ ಪೆಲಕಂಡ, ವಿದುಷಿ ಎಂ.ಆರ್.ಸುಧಾ ಅವರಿಗೆ ಮಾತಾ ವಿಜಯಕುಮಾರಿ ವಿ.ರಾವ್ ಪ್ರಶಸ್ತಿ ನೀಡಿ ಅಭಿನಂದಿಲಾಯಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಅಲಯನ್ಸ್ ಸಂಸ್ಥೆ ನಿಕಟಪೂರ್ವ ಗವರ್ನರ್ ಲಯನ್ ಎಸ್.ವೆಂಕಟೇಶ್, ಸಂಗೀತ ಶಿಕ್ಷಕಿ ಎಂ.ವಿ.ಅನಿತಾ, ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಸಿಇಓ ಕೆ.ಆರ್.ಯೋಗಾನರಸಿಂಹನ್ ,ಫೌಂಡೇಷನ್ ಸಂಸ್ಥಾಪಕ ಎಸ್.ವಿ.ನಾಗೇಂದ್ರ ಬಾಬು ಉಪಸ್ಥಿತರಿದ್ದರು.