ಹಿಂದುಳಿದ ವರ್ಗದವರನ್ನು ಅವಮಾನಿಸುವ ರಾಹುಲ್ ಗಾಂಧಿ, ತಾನು ಬಲಿಪಶು ಎಂಬಂತೆ ನಟಿಸಬಾರದು: ಅಮಿತ್ ಶಾ

*ಹಿಂದುಳಿದ ವರ್ಗದವರನ್ನು ಅವಮಾನಿಸುವ ರಾಹುಲ್ ಗಾಂಧಿ, ತಾನು ಬಲಿಪಶು ಎಂಬಂತೆ ನಟಿಸಬಾರದು: ಅಮಿತ್ ಶಾ *

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕಿಂತ 15-20 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಶನಿವಾರ ಭರವಸೆ ವ್ಯಕ್ತಪಡಿಸಿದರು. ಮತ್ತು ಪಕ್ಷದ ಕೆಲವು ನಾಯಕರು ಪಕ್ಷಾಂತರಗೊಂಡರೂ, ಪಕ್ಷದ ನೆಲೆಯು ಅಖಂಡವಾಗಿದೆ ಎಂದು ಪ್ರತಿಪಾದಿಸಿದರು. ಬಿಜೆಪಿಯ ಬಂಡಾಯಗಾರರು ಎಂದಿಗೂ ಗೆಲ್ಲುವುದಿಲ್ಲ ಎಂಬುದು ಇತಿಹಾಸ ಮತ್ತು ಅದು ಈ ಬಾರಿಯೂ ನಿಜವಾಗಲಿದೆ. ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ನ ಭ್ರಷ್ಟಾಚಾರ ಆರೋಪಗಳನ್ನು ‘ಆಧಾರ ರಹಿತ’ ಎಂದು ತಿರಸ್ಕರಿಸಿದ ಶಾ, ಕರ್ನಾಟಕವನ್ನು ‘ಎಟಿಎಂ’ ಆಗಿ ಬಳಸುತ್ತಿರುವ ಕಾಂಗ್ರೆಸ್, ತನ್ನ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು, ಯಾವುದೇ ನ್ಯಾಯಾಲಯದಲ್ಲಿ ಪ್ರಮಾಣೀಕರಿಸಲು ಸಾಧ್ಯವಿಲ್ಲದಿದ್ದರೂ ಬಿಜೆಪಿಯನ್ನು ದೂಷಿಸುತ್ತಿದೆ ಎಂದು ಕಿಡಿಕಾರಿದರು.

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿದ್ದಕ್ಕಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಗ್ಗೆ, “ಭಾರತದಲ್ಲಿ ಯಾವುದೇ ಕುಟುಂಬ ಕಾನೂನಿಗಿಂತ ಮೇಲೆ ಇಲ್ಲ ಮತ್ತು ಕಾನೂನೂ ಎಲ್ಲರಿಗೂ ಒಂದೇ ” ಎಂದು ಹೇಳಿದರು.

ತೆರವು ನೋಟಿಸ್ ನೀಡಿದ ನಂತರ, ರಾಹುಲ್ ಗಾಂಧಿ ಶನಿವಾರ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿದರು ಮತ್ತು ಅವರು ಸತ್ಯವನ್ನು ಮಾತನಾಡಿದ್ದಕ್ಕಾಗಿ ತಾನು ಬೆಲೆ ಕಟ್ಟುತ್ತಿದ್ದೇನೆ ಎಂದು ಹೇಳಿದ್ದಾರೆ. ಗಾಂಧಿ ‘ಬಲಿಪಶು’ ಎಂಬಂತೆ ಬಿಂಬಿತವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾ, “ರಾಹುಲ್ ಗಾಂಧಿಗೆ ಒಬಿಸಿ ಸಮುದಾಯವನ್ನು ಅವಮಾನಿಸುವಂತೆ ನಾವು ಹೇಳಿಲ್ಲ. ಅದಕ್ಕೆ ಕ್ಷಮೆ ಕೇಳದಿರಲು ಅವರೇ ನಿರ್ಧರಿಸಿದ್ದಾರೆ.

‘ಅವರಿಗೆ ಶಿಕ್ಷೆ ವಿಧಿಸಿದ ಕಾನೂನನ್ನು ಕಾಂಗ್ರೆಸ್ ಸರ್ಕಾರವೇ ರೂಪಿಸಿದೆ. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಆ ಕಾನೂನನ್ನು ಹಿಂಪಡೆಯಲು ಪ್ರಯತ್ನಿಸಿದ್ದರು, ಆದರೆ ರಾಹುಲ್ ಗಾಂಧಿ ಅವರೇ ಆ ಸುಗ್ರೀವಾಜ್ಞೆ ಪ್ರತಿಯನ್ನು ಹರಿದು ಹಾಕಿದರು. ಅವರು ಇನ್ನು ಮುಂದೆ ತಾನು ಬಲಿಪಶು ಎಂಬ ನಾಟಕ ಆಡಬಾರದು. ಯಾವುದೇ ಕುಟುಂಬವು ಕಾನೂನನ್ನು ಮೀರಿದೆ ಎಂದು ಯಾರೂ ಭಾವಿಸಬಾರದು. ಸಂಸತ್ತು ಸುಗ್ರೀವಾಜ್ಞೆಯನ್ನು ಅಂಗೀಕರಿಸಿದ್ದರೆ, ಯಾವುದೇ ತಪ್ಪಿತಸ್ಥ ಸಂಸದರನ್ನು ತಕ್ಷಣವೇ ಅನರ್ಹತೆಗೊಳಿಸುವುದರಿಂದ ಉಳಿಸಲಾಗುತ್ತಿತ್ತು.

ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರನ್ನು ಸಿಬಿಐ ವಿಚಾರಣೆಗೆ ಕರೆದಿರುವ ಬಗ್ಗೆ ಕೇಳಿದಾಗ, “ತನಿಖಾ ಸಂಸ್ಥೆಯು ಈ ಹಿಂದೆಯೂ ಅವರಿಗೆ ಸಮನ್ಸ್ ನೀಡಿದ್ದರಿಂದ ಅಂತಹ ಆರೋಪ ಸರಿಯಲ್ಲ” ಎಂದು ಶಾ ಹೇಳಿದರು. ಮುಚ್ಚಿಡಬೇಕಾದ ಯಾವ ಕೆಲಸವನ್ನೂ ಬಿಜೆಪಿ ಮಾಡಿಲ್ಲ. ನಮ್ಮನ್ನು ಅಗಲಿದ ನಂತರ ಯಾರಾದರೂ ಆರೋಪಗಳನ್ನು ಮಾಡುತ್ತಿದ್ದರೆ, ಮಾಧ್ಯಮಗಳು ಮತ್ತು ಜನರು ಅದಕ್ಕೆ ತಕ್ಕಂತೆ ಆ ವಿಷಯಗಳ ಮೌಲ್ಯಮಾಪನ ಮಾಡುವುದು ಒಳ್ಳೆಯದು.

ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, 224 ಸದಸ್ಯ ಬಲದ ವಿಧಾನಸಭೆಯಲ್ಲಿ ಭಾಜಪ ಅರ್ಧ ಸ್ಥಾನಗಳಾದ 112 ಸೀಟುಗಳಿಗಿಂತ, 15-20 ಸ್ಥಾನಗಳನ್ನು ಹೆಚ್ಚು ಪಡೆಯಲಿದೆ ಎಂದು ಹೇಳಿದರು.

2009-14ರ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಕೇಂದ್ರವು ರಾಜ್ಯಕ್ಕೆ ಕೇವಲ 94,224 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. 2014-19ರ ಅವಧಿಯಲ್ಲಿ ಪ್ರಧಾನಿ ಮೋದಿಯವರು ಈ ಮೊತ್ತವನ್ನು 2.26 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದರು. ಅಲ್ಲದೆ, ತೆರಿಗೆ ಹಂಚಿಕೆ ಮತ್ತು ಅನುದಾನದಲ್ಲಿ ಕಾಂಗ್ರೆಸ್ ಸರ್ಕಾರ 22,000 ಕೋಟಿ ರೂ.ಗಳನ್ನು ನೀಡುತ್ತಿದ್ದು, ಅದನ್ನು 75,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಶಾ, ರಾಜ್ಯದಲ್ಲಿ ಮುಸ್ಲಿಮರಿಗೆ ಶೇಕಡಾ ನಾಲ್ಕು ಪ್ರತಿಶತ ಮೀಸಲಾತಿ ನೀಡುವ ಮೂಲಕ ಕಾಂಗ್ರೆಸ್ ಸಂವಿಧಾನವನ್ನು ಉಲ್ಲಂಘಿಸಿತ್ತು ಎಂದು ಹೇಳಿದರು. ಸಂವಿಧಾನವು ಧಾರ್ಮಿಕ ಆಧಾರದ ಮೇಲೆ ಯಾವುದೇ ರೀತಿಯ ಮೀಸಲಾತಿಯನ್ನು ಅನುಮತಿಸುವುದಿಲ್ಲ. ಬಿಜೆಪಿ ಸರಕಾರ ಈ ಮೀಸಲಾತಿಯನ್ನು ರದ್ದುಪಡಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಿಸಿ ಸಾಮಾಜಿಕ ನ್ಯಾಯ ಒದಗಿಸಿದೆ.

ಕಾಂಗ್ರೆಸ್ ತನ್ನ ಆಡಳಿತ ಕಾಲದಲ್ಲಿ ಕಟ್ಟರ್ ಇಸ್ಲಾಮಿಕ್ ಸಂಘಟನೆಯಾದ ಪಿಎಫ್ಐ ಅನ್ನು ‘ರಕ್ಷಿಸಿ ಮತ್ತು ಪೋಷಿಸಿತು’, ಈಗ ಮೋದಿ ಸರ್ಕಾರವು ಅದನ್ನು ನಿಷೇಧಿಸಿದೆ. ಪಿಎಫ್ಐ ಕಾರ್ಯಕರ್ತರು ರಾಜ್ಯದಲ್ಲಿ ಹಾಡು ಹಗಲಿನಲ್ಲಿಯೇ ಹತ್ಯೆ ಮಾಡುತ್ತಿದ್ದರು. ಪ್ರಧಾನಿ ಮೋದಿ ಅದನ್ನು ನಿಷೇಧಿಸಿ, ರಾಜ್ಯದ ಜನತೆಗೆ ಭದ್ರತೆ ಒದಗಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡುತ್ತಾ ಶಾರವರು, “ಭಾರತದ ಮೇಲಿನ ಯಾವುದೇ ದಾಳಿಗೆ ನಾವು ತಕ್ಕ ಪ್ರತ್ಯುತ್ತರ ನೀಡುತ್ತೇವೆ” ಎಂದು ಹೇಳಿದರು. ಭಾರತದ ವಿದೇಶಿ ರಾಯಭಾರಿ ಕಚೇರಿಗಳ ಮೇಲಿನ ಹಿಂಸಾಚಾರವನ್ನು ಮೋದಿ ಸರ್ಕಾರವು ಲಘುವಾಗಿ ಪರಿಗಣಿಸುವುದಿಲ್ಲವೆಂದರು.

ಮೋದಿ ಮೇಲಿನ ವೈಯಕ್ತಿಕ ದಾಳಿಯ ಕುರಿತು ಅಮಿತ್ ಶಾ ಅವರು, ‘ಮೋದಿಯವರ ಮೇಲಿನ ವೈಯಕ್ತಿಕ ದಾಳಿಗಳು ಹೊಸದೇನಲ್ಲ. ಬಹಳ ಹಿಂದೆಯೇ ಸೋನಿಯಾ ಗಾಂಧಿ ಅವರನ್ನು ‘ಸಾವಿನ ವ್ಯಾಪಾರಿ’ ಎಂದು ಕರೆದಿದ್ದರು. ಆದರೆ ಮೋದಿಯವರು ಅಂತಹ ದಾಳಿಗಳನ್ನು ಎದುರಿಸಿದಾಗಲೆಲ್ಲಾ ಇನ್ನಷ್ಟು ಬಲಶಾಲಿಯಾಗಿ ಹೊರಹೊಮ್ಮಿದ್ದಾರೆ.

Leave a Reply

Your email address will not be published. Required fields are marked *