ವಿಜೃಂಭಣೆಯಿಂದ ಜರುಗಿದ 412 ನೇ ಐತಿಹಾಸಿಕ ದಸರಾ

ನಂದಿನಿ ಮೈಸೂರು

412 ನೇ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.

ಅರಮನೆ ಅವರಣದಲ್ಲಿ ಸಂಜೆ 05:37ಕ್ಕೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಮೆರವಣಿಗೆಗೆ
ಮುಖ್ಯಮಂತ್ರಿಯವರಾದ ಬಸವರಾಜ್ ಬೊಮ್ಮಾಯಿಯವರು, ಮಹಾರಾಜ ಯದುವೀರ್ ಶ್ರೀ ಕೃಷ್ಣರಾಜ ಚಾಮರಾಜ್ ಒಡೆಯರ್, ಇಂಧನ ಸಚಿವರಾದ ವಿ.ಸುನೀಲ್ ಕುಮಾರ್, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಮತ್ತು ದಸರಾ ವಿಶೇಷಾಧಿಕಾರಿಯವರಾದ ಡಾ.ಬಗಾದಿ ಗೌತಮ್, ಪೊಲೀಸ್ ಕಮೀಷನರ್ ಡಾ.ಚಂದ್ರಗುಪ್ತರವರು ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.

750ಕೆಜಿ ತೂಕದ ಚಿನ್ನದ ಅಂಬಾರಿ ಜೊತೆಗೆ ಚಾಮುಂಡೇಶ್ವರಿ ದೇವಿ ಉತ್ಸವ ಮೂರ್ತಿಯ‌ನ್ನು ಹೊತ್ತ ಅಭಿಮನ್ಯು ತನ್ನ ಗಜ ಗಾಂಭೀರ್ಯದಿಂದ ಕುಮ್ಕಿ ಆನೆಗಳಾದ ಚೈತ್ರ ಮತ್ತು ಕಾವೇರಿಯೊಂದಿಗೆ ಹೆಜ್ಜೆ ಹಾಕಿತು.

ಮೌಂಟೆಡ್ ಕೆ.ಆರ್.ಪಿ ಕಮಾಂಡೆಂಟ್ ಅವರಾದ ಎಂ.ಜಿ ನಾಗರಾಜ ಮತ್ತು ಎಸ್.ಡಿ.ಸಾಸನೂರು ಅವರ ನೇತೃತ್ವದಲ್ಲಿ 8 ತುಕಡಿಗಳಾದ 2 ಕೆ.ಎಸ್.ಆರ್.ಪಿ, 1 ಸಿ.ಎ.ಆರ್, 1 ಡಿ.ಎ.ಆರ್, 1 ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಹಾಗೂ 1 ಗೃಹದಳದ ಮುಂದಾಳತ್ವದಲ್ಲಿ ಕ್ಯಾಪ್ಟನ್ ಅಭಿಮನ್ಯು ನಾಡದೇವಿ ಉತ್ಸವ ಮೂರ್ತಿಯನ್ನು ಹೊತ್ತು ರಾಜಬೀದಿಗಳಲ್ಲಿ ಸಾಗಿತು.

*ಜಂಜೂ ಸವಾರಿಗೂ ಮುನ್ನ ಕರ್ನಾಟಕದ ವಿವಿಧ ಜಿಲ್ಲೆಗಳ ಸ್ತಬ್ಧ ಚಿತ್ರಗಳು ದಸರಾ ಮಹೋತ್ಸವಕ್ಕೆ ಮೆರಗು*

ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ವತಿಯಿಂದ ಅನೇಕ ಪರಿಕಲ್ಪನೆಯಡಿ ಸಿದ್ಧಪಡಿಸಲಾಗಿದ್ದ ಅರಮನೆ ವಾದ್ಯಗೋಷ್ಠಿಯೂ ಸೇರಿದಂತೆ 48 ಅತ್ಯುತ್ತಮವಾದ ಸ್ತಬ್ದ ಚಿತ್ರಗಳು ನೋಡುಗರ ಕಣ್ಣಿಗೆ ಹಬ್ಬ, ಮನಸ್ಸಿಗೆ ಉಲ್ಲಾಸ ನೀಡುವಲ್ಲಿ ಯಶಸ್ವಿಯಾದವು. ಸ್ತಬ್ದ ಚಿತ್ರಗಳನ್ನು ನೋಡುತ್ತಿದ್ದಂತೆ ಎಲ್ಲರ ಉತ್ಸಾಹ ಇಮ್ಮಡಿಯಾಗಿತು.

ಮೈಸೂರು ಜಿಲ್ಲೆ ವತಿಯಿಂದ ಸಿದ್ಧಪಡಿಸಲಾಗಿದ್ದ ಸ್ತಬ್ದ ಚಿತ್ರದಲ್ಲಿ ಜಿಯೋಗ್ರಾಫಿಕಲ್ ಇಂಡಿಕೇಶನ್ ಬೆಳೆಗಳಾದ ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ ರಚಿಸಲಾಗಿತ್ತು. ಮೈಸೂರು ಪಾಕ್, ಮೈಸೂರು ಪೇಟ, ಮೈಸೂರು ರೇಷ್ಮೆ ಸೀರೆ, ಅಗರಬತ್ತಿ, ಸ್ಯಾಂಡಲ್ ಸೋಪು, ದೊಡ್ಡಗಡಿಯಾರ, ಜೆಟ್ಟಿ ಕಾಳಗ ಮತ್ತು ಸೋಮನಾಥಪುರ ಚನ್ನಕೇಶವ ದೇವಸ್ಥಾನ ಎಲ್ಲರ ಗಮನ ಸೆಳೆಯಿತು.

ಮೈಸೂರು ವಿಶ್ವವಿದ್ಯಾನಿಲಯದ ಸ್ತಬ್ದ ಚಿತ್ರವು ಕ್ರಾಫರ್ಡ್ ಹಾಲ್, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚಿತ್ರಗಳ ಜೊತೆಗೆ ಶೈಕ್ಷಣಿಕ ಪದವಿಯ ಮಹತ್ವ ತಿಳಿಸಿತು. ವಿಜಯನಗರ ಜಿಲ್ಲೆಯ ವತಿಯಿಂದ ನಿರ್ಮಿಸಲಾಗಿದ್ದ ಸ್ತಬ್ದ ಚಿತ್ರದಲ್ಲಿ ಹಂಪಿಯ ಕಲ್ಲಿನ ರಥಕ್ಕೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಿದ್ಧಗೊಂಡಿದ್ದ ಸ್ತಬ್ಧ ಚಿತ್ರವು ಜನರಿಗೆ ಉತ್ತಮ ಆರೋಗ್ಯ ಜೀವನ ಶೈಲಿಯ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಆಯುಷ್ಮಾನ್ ಕಾರ್ಡ್ ಸೌಲಭ್ಯ ಕುರಿತು ಅರಿವು ಮೂಡಿಸಿತು.

ಉಡುಪಿ ಜಿಲ್ಲೆಯ ಕೈಮಗ್ಗ ಸೀರೆ ನೇಯ್ಗೆ ಹಾಗೂ ಜಿಲ್ಲೆಯ ಸಾಂಪ್ರದಾಯಿಕ ಕಲೆಗಳ ಪ್ರದರ್ಶನ ಮತ್ತು ಯಕ್ಷಗಾನ ಚಿತ್ರಗಳು ಉತ್ತಮವಾಗಿದ್ದವು. ಮಂಡ್ಯ ಜಿಲ್ಲೆಯ ಭೂವರಹನಾಥಸ್ವಾಮಿ ವಿಗ್ರಹ ಹಾಗೂ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ, ಬಸರಾಳು ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಒಳಗೊಂಡ ಸ್ತಬ್ದ ಚಿತ್ರವು ಎಲ್ಲರಲ್ಲಿ ಭಕ್ತಿಭಾವ ಮೂಡಿಸಿತು.

ಕೊಪ್ಪಳ ಜಿಲ್ಲೆಯ ಆನೆಗೊಂದಿ ಕೋಟೆ, ಕಿನ್ನಾಳ ಗೊಂಬೆ ಮತ್ತು ಅಂಜನಾದ್ರಿ ಬೆಟ್ಟದ ಸ್ತಬ್ದ ಚಿತ್ರ ಹಾಗೂ ಕೋಲಾರ ಜಿಲ್ಲೆಯ ವತಿಯಿಂದ ಪದ್ಮವಿಭೂಷಣ ಶ್ರೀ ಬಿ.ಕೆ.ಎಸ್. ಐಯ್ಯಂಗಾರ್ ಅವರ ಶತಮಾನೋತ್ಸವ ನೆನಪಿನಲ್ಲಿ ಸಿದ್ಧಪಡಿಸಲಾಗಿದ್ದ ಸ್ತಬ್ದ ಚಿತ್ರದಲ್ಲಿ ದಕ್ಷಿಣ ಕಾಶಿ ಅಂತರಗಂಗೆ, ಯೋಗಾಸನ, ವ್ಯಾಯಾಮವು ನೋಡುಗರ ಮನಗೆದ್ದಿತು.

ಶಿವಮೊಗ್ಗ ಜಿಲ್ಲೆಯ ಅಕ್ಕಮಹಾದೇವಿ ದೇವಸ್ಥಾನ ಹಾಗೂ ಜೂವನ ಚರಿತ್ರೆ ಸಾರುವ ಗುಹೆ, ಅನುಭವ ಮಂಟಪ ಸ್ತಬ್ದ ಚಿತ್ರ ನೋಡುತ್ತಿದ್ದಂತೆ ಎಲ್ಲರ ಚಿತ್ತ ನೆಟ್ಟಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತಬ್ದ ಚಿತ್ರವು ಜನಸೇವಕ, ಜನಸ್ಪಂದನ, ಅಮೃತ ಗ್ರಾಮ ಪಂಚಾಯತಿ ಸೇರಿದಂತೆ ಸರ್ಕಾರ ವಿವಿಧ ಯೋಜನೆಗಳ ಮಾಹಿತಿ ನೀಡಿತು.

ಚಾಮರಾಜ ನಗರ ಜಿಲ್ಲೆಯ ವನ್ಯಧಾಮ, ಶ್ರೀ ಮಹದೇಶ್ವರ ವಿಗ್ರಹ ಹಾಗೂ ದಿವಂಗತ ನಟ ಪುನೀತ್ ರಾಜ್ ಕುಮಾರ್ ಪ್ರತಿಮೆ ಕಂಡು ಸಂತೋಷಗೊಂಡರು. ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟ, ರಣಹದ್ದು ಪಕ್ಷಿಧಾಮ, ಬಾಗಲಕೋಟ ಜಿಲ್ಲೆಯ ಮುಧೋಳ ಶ್ವಾನ, ಇಳಕಲ್ ಸೀರೆ, ದುರ್ಗಾಂಬ ದೇವಸ್ಥಾನ, ಬೀದರ್ ಜಿಲ್ಲೆಯ ನೂತನ ಅನುಭವ ಮಂಟಪ, ಕರ್ನಾಟಕ ಸಹಕಾತಿ ಹಾಲು ಉತ್ಪಾದಕರ ಮಹಾ ಮಂಡಳಿ ನಿಯಮಿತ, ಸಹಕಾರ ಇಲಾಖೆ, ಸೇರಿದಂತೆ ಅನೇಕ ಸ್ತಬ್ದ ಚಿತ್ರಗಳನ್ನು ಕಣ್ತುಂಬಿಕೊಂಡರು.

ಡಿಸಿಪಿ ಪ್ರದೀಪ್ ಗುಂಟಿ,ಗೀತಾ ಪ್ರಸನ್ನ ಅವರ ನೇತೃತ್ವದಲ್ಲಿ ಬೀಗಿ ಬಂದೋಬಸ್ತ್ ಮಾಡಲಾಗಿತ್ತು.

Leave a Reply

Your email address will not be published. Required fields are marked *