ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು:26 ಆಗಸ್ಟ್ 2022

ನಂದಿನಿ ಮೈಸೂರು

ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದವರು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡು, ಪತ್ರಕರ್ತರೊಂದಿಗೆ ಚರ್ಚಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷಗಳಿಗಿಂತ ಹೆಚ್ಚಾಗಿದೆ. ಇದು ಜನರ ಆಶೀರ್ವಾದದೊಂದಿಗೆ ಬಂದ ಸರ್ಕಾರ ಅಲ್ಲ, ಅನೈತಿಕವಾಗಿ ರಚನೆಯಾಗಿರುವ ಸರ್ಕಾರ. ಕಳೆದ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ, ನಾವು 80 ಹಾಗೂ ಜೆಡಿಎಸ್‌ 37 ಸ್ಥಾನಗಳನ್ನು ಗೆದ್ದಿದ್ದು. ಶೇಕಡಾವಾರು ಮತಗಳನ್ನು ನೋಡಿದಾಗ ನಮ್ಮ ಪಕ್ಷ ಹೆಚ್ಚು ಮತ ಪಡೆದಿತ್ತು, ನಾವು 38.14%, ಬಿಜೆಪಿ 36.34% ಹಾಗೂ 18% ಮತಗಳನ್ನು ಜೆಡಿಎಸ್‌ ಪಡೆದಿತ್ತು. ನಾವು 1.8% ಮತಗಳನ್ನು ಹೆಚ್ಚು ಪಡೆದಿದ್ದರೂ ನಮಗೆ 80 ಸೀಟು ಹಾಗೂ ಬಿಜೆಪಿಗೆ 104 ಸೀಟು ಬಂದಿತ್ತು. ಜನಾಭಿಪ್ರಾಯ ಬಿಜೆಪಿಯ ಪರವಾಗಿ ಬಂದಿರಲಿಲ್ಲ. ಆ ನಂತರ ಯಡಿಯೂರಪ್ಪ ಅವರು ಆಪರೇಷನ್‌ ಕಮಲ ಮಾಡಿ, ಶಾಸಕರನ್ನು ಕೊಂಡುಕೊಂಡು ಹಿಂಬಾಗಿಲಿನಿಂದ ಅಧಿಕಾರಕ್ಕೆ ಹಿಡಿದರು.

ಯಡಿಯೂರಪ್ಪ ಅವರು 2 ವರ್ಷ ಮುಖ್ಯಮಂತ್ರಿಯಾಗಿದ್ದರು, ಆ ನಂತರ ಬಸವರಾಜ ಬೊಮ್ಮಾಯಿ ಅವರು 1 ವರ್ಷಗಳ ಆಡಳಿತವನ್ನು ಪೂರೈಸಿದ್ದಾರೆ. ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದರೂ 2018ರಲ್ಲಿ ಬಿಜೆಪಿ ಪಕ್ಷ ಚುನಾವಣಾ ಪ್ರಣಾಳಿಕೆಯ ಭರವಸೆಗಳಲ್ಲಿನ 10% ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಈ ಮಾತನ್ನು ಸದನದ ಒಳಗೆ ಮತ್ತು ಹೊರಗೆ ಹೇಳಿದ್ದೇನೆ ಹಾಗೂ ಈ ವಿಚಾರದಲ್ಲಿ ಬಿಜೆಪಿ ಅವರ ಜೊತೆ ಈಗಲೂ ಚರ್ಚೆಗೆ ಸಿದ್ಧವಿದ್ದೇನೆ. ಬಿಜೆಪಿಗೆ ತನ್ನ ಭರವಸೆಗಳನ್ನು ಈಡೇರಿಸಲು ದುಡ್ಡಿಲ್ಲ, ನಾವು ಜಾರಿಗೆ ತಂದಿದ್ದ ಕಾರ್ಯಕ್ರಮಗಳನ್ನು ನಿಲ್ಲಿಸುತ್ತಿದ್ದಾರೆ, ಕೆಲವನ್ನು ಈಗಾಗಲೇ ನಿಲ್ಲಿಸಿದ್ದಾರೆ.

ಇತ್ತೀಚೆಗೆ ಉಮೇಶ್‌ ಕತ್ತಿ ಅವರು ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಬಡವರಿಗೆ ಅಕ್ಕಿ ಕೊಡುವುದನ್ನು ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಇದು ಮಂತ್ರಿಮಂಡಲದಲ್ಲಿ ಅವರು ಚರ್ಚೆ ಮಾಡುವ ವಿಷಯ, ಅದನ್ನೇ ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕೆ 2 ಕಾರಣಗಳಿರಬಹುದು, ಒಂದು ಅಕ್ಕಿ ಕೊಡಲು ದುಡ್ಡಿಲ್ಲದೆ ಇರಬಹುದು, ಇನ್ನೊಂದು ಹಸಿದವರ ಮತ್ತು ಬಡವರ ಮೇಲೆ ದ್ವೇಷ ಇರಬಹುದು.

ಈ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದನ್ನು ರಾಜ್ಯದ ಜನ ಮಾತನಾಡುತ್ತಿದ್ದಾರೆ, ವಿಧಾನಸೌಧದ ಗೋಡೆಗಳು ಹೇಳುತ್ತಿವೆ, ಅಧಿಕಾರಿಗಳು, ರಾಜ್ಯ ಗುತ್ತಿಗೆದಾರರ ಸಂಘದವರು ಹೇಳುತ್ತಿದ್ದಾರೆ. ಗುತ್ತಿಗೆದಾರರ ಸಂಘದವರು ಎರಡನೇ ಬಾರಿ ಮಾಧ್ಯಮದ ಮುಂದೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು 07/06/2021ರಂದು ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯ ಸರ್ಕಾರ ನಮಗೆ 40% ಕಮಿಷನ್‌ ಕೇಳುತ್ತಿದೆ, ಇದರಿಂದ ಕೆಲಸ ಮಾಡಲು ಆಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಪತ್ರದಲ್ಲಿ ಈ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ, ಆದರೆ ಪತ್ರ ಬರೆದು ವರ್ಷ ಆದರೂ ಪ್ರಧಾನಿಗಳು ಯಾವ ಕ್ರಮ ಕೈಗೊಂಡಿಲ್ಲ. ಪತ್ರದ ಒಂದು ಪ್ರತಿಯನ್ನು ನನಗೂ ಕಳಿಸಿಕೊಟ್ಟಿದ್ದರು, ರಾಜ್ಯ ಸರ್ಕಾರಕ್ಕೂ ನೀಡಿದ್ದರು. ರಾಜ್ಯ ಸರ್ಕಾರವೂ ಯಾವ ಕ್ರಮ ಕೈಗೊಂಡಿಲ್ಲ.

24ನೇ ತಾರೀಖಿನಂದು ಕೆಂಪಣ್ಣನವರು ಸೇರಿದಂತೆ ಸುಮಾರು 20 ಜನ ನನ್ನನ್ನು ಭೇಟಿ ಮಾಡಿ, ಮತ್ತೊಂದು ಮನವಿ ಪತ್ರ ನೀಡಿದ್ದಾರೆ. ಮನವಿಯಲ್ಲಿ, ಇಷ್ಟು ದಿನ ಕಳೆದರೂ ಎರಡೂ ಸರ್ಕಾರಗಳು ಯಾವ ಕ್ರಮ ಕೈಗೊಂಡಿಲ್ಲ, ಬೆಂಗಳೂರು ಮಹಾನಗರ ಪಾಲಿಕೆಯ ಕಾಮಗಾರಿಗಳಲ್ಲಿ ಕಮಿಷನ್‌ 40% ಇಂದ 50% ಗೆ ಹೆಚ್ಚಾಗಿದೆ. ಕೆಲವು ಕಡೆ 100% ಕಮಿಷನ್‌ ತೆಗೆದುಕೊಳ್ಳಲಾಗುತ್ತಿದೆ. ಎಲ್ಲಾ ಸಚಿವರು, ಮುಖ್ಯಮಂತ್ರಿಗಳು ಕೂಡ ಕಮಿಷನ್‌ ತೆಗೆದುಕೊಳ್ತಾರೆ, ಅದರಲ್ಲೂ ಮುಖ್ಯವಾಗಿ ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಒತ್ತಡ ಹಾಕಿ ಕಮಿಷನ್‌ ಪಡೆಯುತ್ತಾರೆʼ ಎಂದು ಹೇಳಿದ್ದಾರೆ. ಆದರೆ ಸಾಮಾನ್ಯವಾಗಿ ತಮ್ಮ ಮೇಲೆ ಕಿರುಕುಳ ನೀಡುತ್ತಾರೆ, ತಮಗೆ ಕಾಮಗಾರಿಗಳನ್ನು ನೀಡಲ್ಲ ಎಂದು ಗುತ್ತಿಗೆದಾರರು ತಮ್ಮ ಹೆಸರು ಬಹಿರಂಗ ಮಾಡಿಕೊಳ್ಳಲು ಬಯಸಲ್ಲ. ಆದರೆ ಈಗ ಸರ್ಕಾರದ ಕಿರುಕುಳ ತಡೆಯಾಗದೆ ಹೊರಬಂದು ಅಸಮಧಾನ ತೋಡಿಕೊಂಡಿದ್ದಾರೆ.

ಕೆಂಪಣ್ಣನವರಿಗೆ ನಿಮ್ಮ ಬಳಿ ದಾಖಲೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ, ನಿಮ್ಮ ಬಳಿ ಸರಿಯಾದ ದಾಖಲೆಗಳು ಇವೆಯಾ ಎಂದು ನಾನು ಕೇಳಿದೆ. ಅದಕ್ಕೆ ಕೆಂಪಣ್ಣನವರು, ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ ನಮ್ಮ ಬಳಿಯಿರುವ ಎಲ್ಲಾ ದಾಖಲೆಗಳನ್ನು ತನಿಖೆ ವೇಳೆ ನೀಡುತ್ತೇವೆ, ಒಂದು ವೇಳೆ ನಾವು ಮಾಡಿರುವ ಆರೋಪವನ್ನು ಸಾಬೀತು ಮಾಡಲು ಆಗಿಲ್ಲ ಎಂದಾದರೆ ಯಾವುದೇ ರೀತಿಯ ಕಾನೂನಾತ್ಮಕ ಶಿಕ್ಷೆಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದರು.

ಹೈಕೋರ್ಟ್‌ ನ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕಿರುವ ಸಮಸ್ಯೆ ಏನು? ನಾವು ಪ್ರಾಮಾಣಿಕರು, ಯಾವ ಸಚಿವರು ನಯಾಪೈಸೆ ಲಂಚ ಪಡೆದಿಲ್ಲ ಎಂದು ಹೇಳುವ ಬಿಜೆಪಿ ನಾಯಕರು, ನಾನು ಒಂದು ರೂಪಾಯಿ ಲಂಚ ಮುಟ್ಟಿಲ್ಲ ಎನ್ನುವ ಬಸವರಾಜ ಬೊಮ್ಮಾಯಿ ಅವರು, ತಮ್ಮ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಮುನಿರತ್ನ, ಲಂಚ ಎಂದರೆ ಏನೆಂದು ನಮಗೆ ಗೊತ್ತಿಲ್ಲ ಎನ್ನುವ ಸುಧಾಕರ್‌ ನ್ಯಾಯಾಂಗ ತನಿಖೆಗೆ ಯಾಕೆ ಒಪ್ಪುತ್ತಿಲ್ಲ?

ಮೊನ್ನೆ ಮೊನ್ನೆ ಕೊಡಗಿನಲ್ಲಿ ರವಿ ಚೆಂಗಪ್ಪ ಎನ್ನುವವರು ಬೋಪಯ್ಯ ಅವರ ಮೇಲೆ ಆರೋಪ ಮಾಡಿದ್ದು, ಎಸಿಬಿ ದಾಳಿ ವೇಳೆ ಸಿಕ್ಕಿಬಿದ್ದು ಜೈಲುಪಾಲಾಗಿದ್ದ ಅಧಿಕಾರಿಯನ್ನು ಮತ್ತೆ ಅದೇ ಸ್ಥಳಕ್ಕೆ ನಿಯೋಜನೆ ಮಾಡಲು ಶಾಸಕರು 2.5 ಕೋಟಿ ಲಂಚ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು? ರವಿ ಚೆಂಗಪ್ಪ ನಮ್ಮ ಪಕ್ಷದವರ? ಅವರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರು.

ಸಿದ್ದರಾಮಯ್ಯ ಹರಿಶ್ಚಂದ್ರನ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡುತ್ತಾರೆ. ನನ್ನನ್ನು ನಾನು ಯಾವತ್ತೂ ಹರಿಶ್ಚಂದ್ರನ ವಂಶದವನು ಎಂದು ಹೇಳಿಕೊಂಡಿಲ್ಲ. ನಮ್ಮ ಕಾಲದಲ್ಲೂ ಹಗರಣ ಆಗಿದೆ ಎನ್ನುತ್ತಾರೆ, ಆಗ ನಾನು 5 ಪ್ರಕರಣಗಳನ್ನು ಸಿಬಿಐ ಗೆ ವಹಿಸಿದ್ದೆ. ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಇವರೂ ಸಿಬಿಐಗೆ ಕೊಡಲಿ, ತನಿಖೆ ನಡೆಸಲಿ. ನಮ್ಮ ಕಾಲದಲ್ಲೂ ಹಗರಣ ನಡೆದಿದ್ದರೆ ಅದನ್ನೂ ಸೇರಿಸಿ ತನಿಖೆಗೆ ಒಪ್ಪಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಂಭೀರ ಆರೋಪಗಳು ಬಂದಾಗ ನೆಪ ಹೇಳುವ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಭಂಡತನ ಪ್ರದರ್ಶನ ಮಾಡಬಾರದು.

2013ರ ನಮ್ಮ ಪ್ರಣಾಳಿಕೆ ಹಾಗೂ 2018ರ ಬಿಜೆಪಿ ಪ್ರಣಾಳಿಕೆಯನ್ನು ಇಟ್ಟುಕೊಂಡು ಚರ್ಚೆ ಮಾಡೋಣ ಬನ್ನಿ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ 1 ಲಕ್ಷದ ವರೆಗಿನ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು. ರೈತರ ಬೆಳೆಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಲೆ ಕೊಡುತ್ತೇವೆ, ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 5 ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದಿದ್ದರು. ಆದರೆ 4 ವರ್ಷದಲ್ಲಿ ಖರ್ಚು ಮಾಡಿದ್ದೆಷ್ಟು? ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಎಸಿಬಿ ರದ್ದು ಮಾಡುತ್ತೇವೆ ಎಂದಿದ್ದರು, ಮುಖ್ಯಮಂತ್ರಿಗಳ ಹೆಸರಲ್ಲಿ ಪ್ರತೀ ತಾಲೂಕಿಗೆ ಒಂದರಂತೆ ಒಟ್ಟು 300 ಕ್ಯಾಂಟೀನ್‌ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ಇರುವ ಇಂದಿರಾ ಕ್ಯಾಂಟೀನ್‌ ಗಳನ್ನು ಬಂದ್‌ ಮಾಡಿಸುತ್ತಿದ್ದಾರೆ. ಹೀಗೆ ಬಿಜೆಪಿಯ 90% ಗೂ ಅಧಿಕ ಭರವಸೆಗಳು ಈಡೇರಿಕೆಯಾಗದೆ ಹಾಗೆಯೇ ಉಳಿದಿದೆ.

ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸದನದಲ್ಲಿ ಉತ್ತರ ನೀಡುತ್ತಾ, ಈ ನೇಮಕಾತಿಯಲ್ಲಿ ಯಾವ ಭ್ರಷ್ಟಾಚಾರ, ಅಕ್ರಮ ನಡೆದಿಲ್ಲ, ಕಾನೂನು ರೀತಿ ನೇಮಕಾತಿ ನಡೆದಿದೆ ಎಂದಿದ್ದರು. ಇದೇ ರೀತಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದರು. ಆದರೆ ಈಗ ಏನಾಗಿದೆ? ಎಡಿಜಿಪಿ ಅಮೃತ್‌ ಪೌಲ್‌ ಅವರು 300 ಅಭ್ಯರ್ಥಿಗಳಿಂದ 30ಲಕ್ಷದಿಂದ 1 ಕೋಟಿ ವರೆಗೆ ಹಣ ವಸೂಲಿ ಮಾಡಿದ್ದಾರೆ. ಸಿಐಡಿ ಅವರು ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ಇದನ್ನು ನ್ಯಾಯಾಂಗ ತನಿಖೆಗೆ ನೀಡಿ ಎಂದು ಒತ್ತಾಯ ಮಾಡಿದ್ದೆ. ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇವರೆಲ್ಲರೂ ಪ್ರಕರಣದಲ್ಲಿ ಷಾಮೀಲಾಗಿದ್ದಾರೆ, ಸತ್ಯ ಹೊರಬರಬೇಕಾದರೆ ನ್ಯಾಯಾಂಗ ತನಿಖೆಯಿಂದ ಮಾತ್ರ ಸಾಧ್ಯ ಎಂದು ಹೇಳಿದ್ದೆ. ಈಗ ಕೃತ್ಯವನ್ನು ಅಧಿಕಾರಿಗಳ ತಲೆಗೆ ಕಟ್ಟಿ, ಬೇರೆಯವರು ಸೇಫ್‌ ಆಗಿದ್ದಾರೆ. ಹೀಗೆ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲೂ ಅಕ್ರಮ ನಡೆದಿದೆ, ಕೆಇಬಿ ಯಲ್ಲೂ ಅಕ್ರಮ ನಡೆದಿದೆ. ವರ್ಗಾವಣೆ ಪ್ರಕ್ರಿಯೆಗೆ ಹೋಟೆಲ್‌ ತಿಂಡಿಯ ಹಾಗೆ ಬೆಲೆ ನಿಗದಿ ಮಾಡಿದ್ದಾರೆ. ಎಸ್.ಪಿ ಇಂದ ಹಿಡಿದು ಪೊಲೀಸ್ ಕಾನ್ಸ್‌ಟೇಬಲ್ ವರೆಗೆ ಒಂದೊಂದು ಬೆಲೆ ನಿಗದಿ ಮಾಡಿದ್ದಾರೆ. ವರ್ಗಾವಣೆಯಾದ ಒಂದು ವರ್ಷದಲ್ಲಿ ಎಷ್ಟಾದರೂ ಹಣ ಹೊಡೆಯಿರಿ ಎಂದು ಅವರಿಗೆ ಅವಕಾಶ ಕೊಟ್ಟಿದ್ದಾರೆ.

ನನ್ನ 5 ವರ್ಷಗಳ ಅಧಿಕಾರದ ಅವಧಿಯಲ್ಲಿ ಎನ್‌,ಒ,ಸಿ ಕೊಡಲು ಯಾವುದೇ ಒಬ್ಬ ವ್ಯಕ್ತಿ ಒಂದು ಪೈಸೆ ನನಗೆ ಲಂಚ ನೀಡಿರುವ ಉದಾಹರಣೆ ಇದ್ದರೆ ತೋರಿಸಿ ನೋಡೋಣ. ಆದರೆ ಈ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ. ಹೋಗಲಿ ಅಭಿವೃದ್ಧಿ ಕಾರ್ಯಗಳಾದರೂ ನಡೆಯುತ್ತಿವೆಯಾ ಅದೂ ಇಲ್ಲ. ಈಗ ಘೋಷಣೆ ಮಾಡುತ್ತಿರುವ ಯೋಜನೆಗಳಿಗೆ ಹಣವೇ ಇಲ್ಲ, ಹಣ ಇಲ್ಲದಿದ್ದರೂ ಯೋಜನೆ ಘೋಷಿಸಿ ಮುಂದೆ ನೋಡೋಣ ಎಂದು ಸುಮ್ಮನಾಗುತ್ತಿದ್ದಾರೆ.

ಲೋಕೋಪಯೋಗಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೇರಿ 22,000 ಕೋಟಿ ಬಿಲ್‌ ಹಣ ಬಿಡುಗಡೆಗೆ ಬಾಕಿ ಇದೆ. ಗುತ್ತಿಗೆ ಕೆಲಸದಲ್ಲಿ 40% ಸರ್ಕಾರಕ್ಕೆ, 20% ಗುತ್ತಿಗೆದಾರನಿಗೆ, 15% ಜಿಎಸ್‌ಟಿ ಗೆ, ಉಳಿದ 25% ನಲ್ಲಿ ಕಾಮಗಾರಿ ನಡೆಯುತ್ತಿದೆ. ಹೀಗಿದ್ದಾಗ ಗುಣಮಟ್ಟದ ಕಾಮಗಾರಿ ಹೇಗೆ ಸಾಧ್ಯ? ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳ್ಳಲ್ಲ. ನಮ್ಮ ಸರ್ಕಾರದ 5 ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ಮಂಜೂರು ಮಾಡಿ, ಕಟ್ಟಿಸಿಕೊಟ್ಟಿದ್ದೆವು. ಕಳೆದ ನಾಲ್ಕು ವರ್ಷಗಳಲ್ಲಿ ಒಂದು ಮನೆ ಮಂಜೂರು ಮಾಡಿ, ಕಟ್ಟಿಸಿದ ಉದಾಹರಣೆ ಇದ್ದರೆ ತೋರಿಸಿ ನೋಡೋಣ. ಬಡವರಿಗೆ ಒಂದು ನಿವೇಶನ ಕೊಟ್ಟಿದ್ದರೆ ತೋರಿಸಿ. ಇದೇ ವಿಚಾರವನ್ನು ಸದನದಲ್ಲಿ ಸಚಿವ ಸೋಮಣ್ಣ ಅವರಿಗೆ ಕೇಳಿದರೆ, ಈಗ ಸರ್ಕಾರ ಆದೇಶ ನೀಡಿದೆ, ಮುಂದೆ ಮನೆ ಕಟ್ಟಿಸಿಕೊಡುತ್ತೇವೆ ಎಂದು ಉತ್ತರಿಸಿದರು.

ಕೊರೊನಾ ಕಾಲದಲ್ಲಿ ಮಾಸ್ಕ್‌, ಔಷಧಿ, ವೆಂಟಿಲೇಟರ್‌ ನಲ್ಲಿ ಹಣ ಲೂಟಿ ಮಾಡಿದರು. ದಾಖಲೆ ಸಮೇತ ಸದನದಲ್ಲಿ ಪ್ರಸ್ತಾಪಿಸಿ ತನಿಖೆ ಮಾಡುವಂತೆ ಒತ್ತಾಯ ಮಾಡಿದೆ, ಸರ್ಕಾರ ಏನು ಕ್ರಮ ತೆಗೆದುಕೊಂಡಿಲ್ಲ.

ಸಿದ್ದರಾಮಯ್ಯ ಅವರ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂದು ಮಾತೆತ್ತಿದರೆ ಆರೋಪ ಮಾಡುತ್ತಿದ್ದರು, ಸ್ವಾತಂತ್ರ್ಯ ಬಂದ ನಂತರದಿಂದ 2018ರ ಬಜೆಟ್‌ ಮಂಡನೆ ಮಾಡುವ ವೇಳೆಗೆ ಕರ್ನಾಟಕದ ಮೇಲೆ ಇದ್ದ ಒಟ್ಟು ಸಾಲ 2 ಲಕ್ಷದ 42 ಸಾವಿರ ಕೋಟಿ. ಇದು ಈ ವರ್ಷದ ಕೊನೆಗೆ 5 ಲಕ್ಷದ 40 ಸಾವಿರ ಕೋಟಿಗೆ ಹೆಚ್ಚಾಗುತ್ತದೆ. 14,000 ಕೋಟಿ ಅಸಲು ಮತ್ತು 29,000 ಕೋಟಿ ಬಡ್ಡಿ, ಒಟ್ಟು ಅಸಲು ಮತ್ತು ಬಡ್ಡಿಗೆ 43,000 ಕೋಟಿ ರೂಪಾಯಿ ಕಟ್ಟಬೇಕು. ಈ ಹಣ ಅಭಿವೃದ್ಧಿ ಕಾರ್ಯಗಳಿಗೆ ಸಿಗುವುದಿಲ್ಲ. ಇವೆಲ್ಲಾ ಬದ್ಧತಾ ಖರ್ಚುಗಳು. ಹಾಗಾಗಿ ಕಳೆದ ಮೂರು ವರ್ಷದಿಂದ ರಾಜಸ್ವ ಕೊರತೆ ಉಂಟಾಗಿದೆ. ರಾಜಸ್ವ ಸಂಗ್ರಹಕ್ಕಿಂತ, ಖರ್ಚು ಹೆಚ್ಚಾಗಿದೆ. ನಾನು ಐದು ವರ್ಷ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವನಾಗಿದ್ದಾಗ ಎಲ್ಲಾ ವರ್ಷಗಳೂ ರಾಜಸ್ವ ಉಳಿಕೆ ಇತ್ತು. ಒಂದು ವರ್ಷವೂ ರಾಜಸ್ವ ಕೊರತೆ ಎದುರಾಗಿರಲಿಲ್ಲ. ನಾವು 20 ರಿಂದ 22 ಸಾವಿರ ಕೋಟಿ ಸಾಲ ತೆಗೆದುಕೊಳ್ಳುತ್ತಿದ್ದೆವು, ಈ ವರ್ಷ ಸರ್ಕಾರ 80,000 ಕೋಟಿ ಸಾಲ ಮಾಡಿದ್ದಾರೆ.

ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಗೆ ನೀಡಿರುವ ಅನುದಾನ ನೋಡಿ, ಎಲ್ಲವೂ ಬಿಡಿಗಾಸಿನ ಲೆಕ್ಕ ಮಾತ್ರ. ನಾವು ಪ್ರತಿ ನಿಗಮಗಳ ಮೂಲಕ 60-70 ಬೋರ್‌ ವೆಲ್‌ ತೋಡಿಕೊಡುತ್ತಿದ್ದೆವು, ಈಗ ಒಂದು ಬೋರ್‌ ವೆಲ್‌ ತೆಗೆಸಿಕೊಡುತ್ತಿದ್ದಾರೆ. ಸಾಕ? ಇದೇನಾ ಬಡವರ ಬಗ್ಗೆ ಕಾಳಜಿ?

ನಮ್ಮ ಸರ್ಕಾರದ ಕೊನೆಯ ಬಜೆಟ್‌ ಗಾತ್ರ 2 ಲಕ್ಷದ 2 ಸಾವಿರ ಕೋಟಿ, ಇದರಲ್ಲಿ ಎಸ್‌,ಸಿ,ಪಿ/ಟಿ,ಎಸ್‌,ಪಿ ಯೋಜನೆಗೆ ನೀಡಿದ್ದ ಅನುದಾನ 30,000 ಕೋಟಿ. ಈಗಿನ ಬಜೆಟ್‌ ಗಾತ್ರ 2 ಲಕ್ಷದ 65 ಸಾವಿರ ಕೋಟಿ ಮತ್ತು ಈ ಯೋಜನೆಗೆ ನೀಡಿರುವ ಅನುದಾನ 28,324 ಕೋಟಿ. ಈ ಅನುದಾನವನ್ನು ಬೇರೆ ಕಡೆಗೆ ಬಳಕೆ ಮಾಡಿಕೊಳ್ಳಬಾರದು ಎಂಬ ನಿಯಮವಿದೆ, ಆದರೆ ಸರ್ಕಾರ 7,885 ಕೋಟಿ ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದೆ.

ಇಲ್ಲಿ ಸರ್ಕಾರ ಎಲ್ಲಿದೆ? ಸರ್ಕಾರ ಸತ್ತು ಹೋಗಿದೆ, ಕೆಟ್ಟು ನಿಂತಿದೆ. ಇದೇ ಕಾರಣಕ್ಕೆ ಮಾಧುಸ್ವಾಮಿ ಅವರು ರಾಜ್ಯದಲ್ಲಿ ಸರ್ಕಾರವೂ ಇಲ್ಲ, ಆಡಳಿತವೂ ಇಲ್ಲ, ಸುಮ್ಮನೆ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದಿದ್ದಾರೆ. ಇಂಥಾ ವಿಚಾರಗಳನ್ನು ನಾನು ಮಾತನಾಡಿದರೆ ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋದರು, ಸಾವರ್ಕರ್‌ ಗೆ ಅವಮಾನ ಮಾಡಿದರು ಎನ್ನುತ್ತಾ ಧರ್ಮ, ಜಾತಿ ವಿಚಾರಗಳಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯಲು ನೋಡುತ್ತಾರೆ.

ಲಂಚ ಕೊಡುವವರು ಇರುವವರೆಗೆ ಲಂಚ ಪಡೆಯುವವರು ಇರುತ್ತಾರೆ, ತಾವಾಗಿಯೇ ಲಂಚ ಕೊಡುವುದು ಬೇರೆ, ಲಂಚ ನೀಡದಿದ್ದರೆ ಬಿಲ್‌ ಹಣ ಬಿಡುಗಡೆ ಮಾಡಲ್ಲ ಎಂದು ಒತ್ತಡ ಹೇರಿ ಲಂಚ ಪಡೆಯುವುದು ಬೇರೆ. ಈಗ 40% ಕಮಿಷನ್‌ ಕಡ್ಡಾಯ ಮಾಡಲಾಗಿದೆ. ಸಂತೋಷ್‌ ಪಾಟೀಲ ಎಂಬ ಗುತ್ತಿಗೆದಾರ ಈಶ್ವರಪ್ಪ ಅವರ ಲಂಚದ ಕಿರುಕುಳಕ್ಕೆ ನೊಂದು ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ. ಇದರಿಂದ ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕಾಯಿತು. ಲಂಚ ಕೊಡುವುದಿಲ್ಲ ಎನ್ನುವವರು ಸಂತೋಷ್‌ ಪಾಟೀಲ್‌ ನಂತೆ ಸಾಯಬೇಕಾಗುತ್ತದೆ.

ಸರ್ಕಾರವೇ ಭ್ರಷ್ಟವಾಗಿದ್ದರೆ ಭ್ರಷ್ಟರ ಮೇಲೆ ಯಾವ ಕ್ರಮ ಕೈಗೊಳ್ಳಲ್ಲ. ಈಶ್ವರಪ್ಪ ಅವರ ಮೇಲಿನ ಆರೋಪದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ, ಅದನ್ನು ಮೃತನ ಸಹೋದರ ಚಾಲೆಂಜ್‌ ಮಾಡಿದ್ದಾರೆ. ಮುಂದೇನಾಗುತ್ತದೋ ಗೊತ್ತಿಲ್ಲ, ಆದರೆ ಈ ರೀತಿ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ನಡೆಯಬಾರದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಸರ್ಕಾರ ಜನರ ಒತ್ತಾಯಕ್ಕೆ ಮಣಿದು, ಅವರ ಆಶಯಗಳ ಈಡೇರಿಕೆ ಮಾಡಬೇಕು. ಒಂದು ವೇಳೆ ಸರ್ಕಾರ ನ್ಯಾಯಾಂಗ ತನಿಖೆ ವಿಚಾರದಲ್ಲಿ ನಮ್ಮ ಒತ್ತಾಯಕ್ಕೆ ಮನ್ನಣೆ ನೀಡದೆ ಹೋದರೆ ಜನರ ಬಳಿಗೆ ಹೋಗುತ್ತೇವೆ. ಜನರೇ ಸರಿಯಾದ ತೀರ್ಪು ನೀಡುತ್ತಾರೆ.

ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಕೊರೊನಾ ಕಾಲದಲ್ಲಿ ನಡೆದ ಅಕ್ರಮ, ಗುತ್ತಿಗೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರ, ಸರ್ಕಾರದ ವೈಫಲ್ಯಗಳ ಬಗ್ಗೆ, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸದಿರುವ ಬಗ್ಗೆ ಪ್ರತಿಭಟನೆ ಮಾಡಿದ್ದೇವೆ, ಸದನದಲ್ಲೂ ಪ್ರಸ್ತಾಪ ಮಾಡಿದ್ದೇವೆ, ನಮ್ಮ ಮಾತಿಗೆ ಸರ್ಕಾರ ಬೆಲೆ ಕೊಡದಿದ್ದರೆ ಇದಕ್ಕಿಂತ ಹೆಚ್ಚಿನದ್ದನ್ನು ನಮ್ಮಿಂದ ಏನು ಮಾಡಲು ಸಾಧ್ಯ?

ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನದ ಬಗೆಗೆ ಗೌರವವೂ ಇಲ್ಲ. ಜನಾಭಿಪ್ರಾಯದ ಚಿಂತೆಯೂ ಇಲ್ಲ. ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬರುವವರಿಗೆ ಈ ಬಗ್ಗೆ ಯಾವ ಚಿಂತೆಯೂ ಇರಲ್ಲ. ನಾವು ಬಿಜೆಪಿಯನ್ನು, ಸಾವರ್ಕರ್‌ ಅವರನ್ನು, ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರನ್ನು ವಿರೋಧ ಮಾಡೋದು ಸೈದ್ಧಾಂತಿಕವಾಗಿ, ವೈಯಕ್ತಿಕವಾಗಿ ಅಲ್ಲ.

ಎಸಿಬಿ ರದ್ದತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ತೀರ್ಪನ್ನು ನಾವು ಸ್ವಾಗತಿಸಿದ್ದೇವೆ. ಎಸಿಬಿ ರಚನೆಗೆ ಕಾರಣವೆಂದರೆ ಭಾಸ್ಕರ್‌ ರಾವ್‌ ಎಂಬ ಲೋಕಾಯುಕ್ತರಿದ್ದರು, ಅವರ ಮಗ ಮನೆಯಲ್ಲಿ ಕೂತು ಲಂಚ ವಸೂಲಿ ಮಾಡುತ್ತಿದ್ದ, ಆದ್ದರಿಂದ ಎಸಿಬಿ ಎಂಬ ಸ್ವತಂತ್ರ ತನಿಖೆಯ ವಿಂಗ್‌ ರಚನೆ ಮಾಡಿದ್ದೆವು. ಗುಜರಾತ್‌ ನಲ್ಲಿ ಎಸಿಬಿ ಇದೆ, ಬೇರೆ ಬೇರೆ ರಾಜ್ಯಗಳಲ್ಲೂ ಎಸಿಬಿ ಇದೆ. ಅಲ್ಲೆಲ್ಲಾ ಬಿಜೆಪಿ ಯಾಕೆ ಸುಮ್ಮನಿದೆ?

ಸಾವರ್ಕರ್‌ ಅಭಿಯಾನವನ್ನು ಬಿಜೆಪಿ ಆರಂಭ ಮಾಡಿದೆ. ಸಾವರ್ಕರ್‌ ಸತ್ತಿದ್ದು 1966ರಲ್ಲಿ, ಅವರು ಜೈಲಿನಿಂದ ಬಿಡುಗಡೆಯಾದದ್ದು 1924 ರಲ್ಲಿ. 1924 ರಿಂದ ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೆ ಒಮ್ಮೆಯಾದರು ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಭಾಗಿಯಾಗಿದ್ದಾರ? ಇದೇ ಆಧಾರದ ಮೇಲೆ ನಾನು ಮಾತನಾಡಿದ್ದು.

ಪ್ರತಾಪ್‌ ಸಿಂಹನಿಗೆ ಸತ್ಯ ಹೇಳಿಯೇ ಗೊತ್ತಿಲ್ಲ, ಅವನೊಬ್ಬ ಯಕಶ್ಚಿತ್‌ ರಾಜಕಾರಣಿ. ನಮ್ಮ ಪಕ್ಷದ ಲಕ್ಷ್ಮಣ್‌ ಸೇರಿದಂತೆ ಅನೇಕರು ಅವರಿಗೆ ಸವಾಲು ಹಾಕಿದ್ದಾರೆ, ಅವರ ಜೊತೆ ಚರ್ಚೆಗೆ ಹೋಗಲಿ. ನಾನು ಮುಖ್ಯಮಂತ್ರಿಯಾಗಿ 5 ವರ್ಷದಲ್ಲಿ ಮೈಸೂರು ನಗರಕ್ಕೆ ಏನು ಮಾಡಿದ್ದೇನೆ, ಪ್ರತಾಪ್‌ ಸಿಂಗ ಸಂಸದರಾಗಿ ಏನು ಮಾಡಿದ್ದಾರೆ ಚರ್ಚೆ ಮಾಡಲಿ. ಮಹಾರಾಣಿ ಕಾಲೇಜು ಕಟ್ಟಿಸಿದ್ದು, ಜಿಲ್ಲಾಸ್ಪತ್ರೆ, ಜಯದೇವಾ ಆಸ್ಪತ್ರೆ ಕಟ್ಟಿಸಿದ್ದು, ಹೆರಿಗೆ ಆಸ್ಪತ್ರೆ ಕಟ್ಟಿಸಿದ್ದು, ಜಯಚಾಮರಾಜೇಂದ್ರ ಪ್ರತಿಮೆ ನಿರ್ಮಾಣ ಮಾಡಿದ್ದು ಪ್ರತಾಪ್‌ ಸಿಂಹನಾ? ಮೊದಲು ಲಕ್ಷ್ಮಣ್‌ ಜೊತೆ ಚರ್ಚೆ ಮಾಡಿ ನಂತರ ನನ್ನ ಬಳಿ ಬರಲಿ.

ತಮಿಳುನಾಡಿನ ರಾಜಕೀಯ ಪಕ್ಷ ಪ್ರತೀ ವರ್ಷ ಅಂಬೇಡ್ಕರ್‌ ಪ್ರಶಸ್ತಿ ನೀಡುತ್ತದೆ. ಈ ವರೆಗೆ ಕರುಣಾನಿಧಿ, ಸ್ಟಾಲಿನ್‌, ಕೇರಳಾ ಮುಖ್ಯಮಂತ್ರಿ‌ ಪಿಣರಾಯಿ ವಿಜಯನ್ ಅವರಿಗೂ ನೀಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದವರಲ್ಲಿ ನಾನು ಆರನೇಯವನು ಇರಬಹುದು.

ನಾವು ನಮ್ಮ ವರ್ತನೆಗಳಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರಯತ್ನ ಮಾಡುತ್ತೇವೆ. ಈ ವಿಚಾರದಲ್ಲಿ ಯಾವ ರಾಜಿಯೂ ಇಲ್ಲ ಎಂದರು.

Leave a Reply

Your email address will not be published. Required fields are marked *