ನಂದಿನಿ ಮನುಪ್ರಸಾದ್ ನಾಯಕ್
ವಿಶ್ವ ಜೀರ್ಣಾಂಗ ಆರೋಗ್ಯ ದಿನ: ದೀರ್ಘಕಾಲದ ಭೇದಿಯನ್ನು ನಿರ್ಲಕ್ಷಿಸಬೇಡಿ

ಹೆಚ್ಚಿನ ಜನರು ಜೀವನದಲ್ಲಿ ಯಾವುದಾದರೊಂದು ಸಮಯದಲ್ಲಿ ಭೇದಿಯನ್ನು ಅನುಭವಿಸಿರುತ್ತಾರೆ – ಸಾಮಾನ್ಯವಾಗಿ ಕಲುಷಿತ ಆಹಾರ ಸೇವನೆಯಿಂದ ಅಥವಾ ಹೊಟ್ಟೆಯ ಸೋಂಕಿನಿಂದ ಇದು ಉಂಟಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಇದು ಕೆಲವು ದಿನಗಳಲ್ಲಿ ಗುಣವಾಗುತ್ತದೆ. ಆದರೆ ವಾರಗಟ್ಟಲೆ ಭೇದಿ ಮುಂದುವರಿದರೆ, ಅದನ್ನು ನಿರ್ಲಕ್ಷಿಸಬಾರದು. ದೀರ್ಘಕಾಲದ ಭೇದಿಯು ಪೋಷಕಾಂಶದ ಕೊರತೆ, ಸುಸ್ತು, ಕೆಲಸದ ಸಾಮರ್ಥ್ಯ ಮತ್ತು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಮುಖ್ಯವಾಗಿ, ಇದು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಗಂಭೀರ ಕಾಯಿಲೆಯ ಲಕ್ಷಣವೂ ಆಗಿರಬಹುದು.
ದೀರ್ಘಕಾಲದ ಭೇದಿ ಎಂದರೇನು?
ಭೇದಿಯು ನಾಲ್ಕು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ಅದನ್ನು “ದೀರ್ಘಕಾಲದ ಭೇದಿ” (Chronic Diarrhoea) ಎಂದು ಕರೆಯಲಾಗುತ್ತದೆ. ಕೆಲವರಿಗೆ ದಿನಕ್ಕೆ ಹಲವಾರು ಬಾರಿ ಮಲವಿಸರ್ಜನೆ ಆಗಬಹುದು, ಇನ್ನು ಕೆಲವರಿಗೆ ಹೊಟ್ಟೆ ನೋವು, ಹೊಟ್ಟೆ ಉಬ್ಬರ ಅಥವಾ ತೂಕ ಇಳಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಸಾಮಾನ್ಯ ಕಾರಣಗಳು
ದೀರ್ಘಕಾಲದ ಭೇದಿಗೆ ಸಾಮಾನ್ಯ ಆಹಾರದ ಅಲರ್ಜಿಯಿಂದ ಹಿಡಿದು ಗಂಭೀರ ಕರುಳಿನ ಕಾಯಿಲೆಗಳವರೆಗೆ ಹಲವು ಕಾರಣಗಳಿರಬಹುದು.
ಇರಿಟೇಬಲ್ ಬೋವಲ್ ಸಿಂಡ್ರೋಮ್ (IBS): ಇದು ಮಾನಸಿಕ ಒತ್ತಡ, ಆತಂಕ ಮತ್ತು ಅನಿಯಮಿತ ಆಹಾರ ಪದ್ಧತಿಯಿಂದ ಉಂಟಾಗುತ್ತದೆ.
ಆಹಾರದ ಅಲರ್ಜಿ: ಕೆಲವರಿಗೆ ಹಾಲು (ಲ್ಯಾಕ್ಟೋಸ್) ಅಥವಾ ಗೋಧಿಯಲ್ಲಿರುವ ಪ್ರೋಟೀನ್ (ಗ್ಲುಟನ್) ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಸೋಂಕುಗಳು: ಕಲುಷಿತ ನೀರು ಮತ್ತು ಆಹಾರದಿಂದ ಉಂಟಾಗುವ ಪರಾವಲಂಬಿ ಜೀವಿಗಳ ಸೋಂಕು ವಾರಗಟ್ಟಲೆ ಇರಬಹುದು.
ಕರುಳಿನ ಉರಿಯೂತ (IBD): ಕರುಳಿನಲ್ಲಿ ಹಣ್ಣು ಅಥವಾ ಉರಿಯೂತ ಉಂಟಾದಾಗ ಮಲದಲ್ಲಿ ರಕ್ತ ಕಾಣಿಸಿಕೊಳ್ಳಬಹುದು.
ಪೋಷಕಾಂಶ ಹೀರಿಕೊಳ್ಳುವಲ್ಲಿ ತೊಂದರೆ: ಮೇದೋಜೀರಕ ಗ್ರಂಥಿ ಅಥವಾ ಯಕೃತ್ತಿನ ಸಮಸ್ಯೆ ಇದ್ದಾಗ ದೇಹವು ಆಹಾರವನ್ನು ಸರಿಯಾಗಿ ಹೀರಿಕೊಳ್ಳುವುದಿಲ್ಲ.
ಮಾತ್ರೆಗಳ ಅಡ್ಡಪರಿಣಾಮ: ಕೆಲವು ಆಂಟಿಬಯೋಟಿಕ್ಸ್ ಅಥವಾ ಸಕ್ಕರೆ ಕಾಯಿಲೆಯ ಮಾತ್ರೆಗಳಿಂದಲೂ ಭೇದಿ ಆಗಬಹುದು.
ಥೈರಾಯ್ಡ್ ಸಮಸ್ಯೆ: ಥೈರಾಯ್ಡ್ ಗ್ರಂಥಿ ಅತಿಯಾಗಿ ಕೆಲಸ ಮಾಡಿದಾಗ ಮಲವಿಸರ್ಜನೆಯ ಸಂಖ್ಯೆ ಹೆಚ್ಚಾಗಬಹುದು.
ನಿರ್ಲಕ್ಷಿಸಬಾರದ ಎಚ್ಚರಿಕೆ ಲಕ್ಷಣಗಳು
ಕೆಳಗಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ:
ಮಲದಲ್ಲಿ ರಕ್ತ ಬೀಳುವುದು
ಕಾರಣವಿಲ್ಲದೆ ತೂಕ ಕಡಿಮೆಯಾಗುವುದು
ಜ್ವರ ಮತ್ತು ತೀವ್ರ ಹೊಟ್ಟೆ ನೋವು
ಸತತ ವಾಂತಿ ಮತ್ತು ರಕ್ತಹೀನತೆ
ರಾತ್ರಿ ನಿದ್ರೆಯಲ್ಲೂ ಭೇದಿಯಾಗುವುದು
ಸಮಸ್ಯೆ 4 ವಾರಗಳಿಗಿಂತ ಹೆಚ್ಚು ಕಾಲ ಇರುವುದು
ಪರೀಕ್ಷೆಗಳು ಹೇಗೆ ಮಾಡಲಾಗುತ್ತದೆ?
ವೈದ್ಯರು ಕೆಲವು ಪರೀಕ್ಷೆಗಳನ್ನು ಸಲಹೆ ಮಾಡಬಹುದು:
ರಕ್ತ ಪರೀಕ್ಷೆ
ಮಲ ಪರೀಕ್ಷೆ
ಅಲ್ಟ್ರಾಸೌಂಡ್ ಅಥವಾ ಸಿಟಿ ಸ್ಕ್ಯಾನ್
ಕೊಲೊನೋಸ್ಕೋಪಿ
ಎಂಡೋಸ್ಕೋಪಿ
ಇವುಗಳಿಂದ ಕಾರಣವನ್ನು ಖಚಿತಪಡಿಸಬಹುದು.
ಆಹಾರದಲ್ಲಿ ಬದಲಾವಣೆ
ಕುದಿಸಿದ ನೀರು ಸೇವಿಸಬೇಕು
ಸ್ವಚ್ಛ ಮತ್ತು ತಾಜಾ ಆಹಾರ ಸೇವನೆ
ಹೆಚ್ಚು ಎಣ್ಣೆ, ಮಸಾಲೆ ಮತ್ತು ಹೊರಗಿನ ಆಹಾರ ಕಡಿಮೆ ಮಾಡುವುದು
ಔಷಧಿಗಳು
ದೀರ್ಘಕಾಲದ ಅತಿಸಾರವು ಕೆಲವು ಸೋಂಕುಗಳು, ಪರೋಪಜೀವಿಗಳು (Parasites)ಗಳಿಂದ ಅಥವಾ ಅಶುದ್ಧ ಆಹಾರ ಮತ್ತು ನೀರಿನ ಬಳಕೆಯಿಂದ ಉಂಟಾಗಬಹುದು. ಚಿಕಿತ್ಸೆಯಲ್ಲಿ ಕಾರಣವಾದ ಸೋಂಕಿನ ಪ್ರಕಾರ ಆಂಟಿಬಯೋಟಿಕ್ ಅಥವಾ ಆಂಟಿಪ್ಯಾರಾಸಿಟಿಕ್ ಔಷಧಿಗಳನ್ನು ನೀಡಲಾಗುತ್ತದೆ ಹಾಗೂ ದೇಹದ ನೀರಿನ ಸಮತೋಲನ ಕಾಪಾಡಲಾಗುತ್ತದೆ. ಸ್ವಚ್ಛ ಆಹಾರ, ಸುರಕ್ಷಿತ ಕುಡಿಯುವ ನೀರು ಮತ್ತು ಸರಿಯಾದ ಪೌಷ್ಟಿಕ ಆಹಾರ ಸೇವನೆ ಚೇತರಿಕೆಗೆ ಸಹಾಯಕವಾಗುತ್ತದೆ.
IBS (Irritable Bowel Syndrome) ಚಿಕಿತ್ಸೆಯಲ್ಲಿ ಮುಖ್ಯವಾಗಿ ಆಹಾರ ನಿಯಂತ್ರಣ, ಜೀವನಶೈಲಿ ಬದಲಾವಣೆ ಮತ್ತು ಒತ್ತಡ ನಿರ್ವಹಣೆ ಒಳಗೊಂಡಿರುತ್ತವೆ. ರೋಗಿಯ ಲಕ್ಷಣಗಳಿಗೆ ಅನುಗುಣವಾಗಿ ಹೊಟ್ಟೆನೋವು, ಮಲಬದ್ಧತೆ ಅಥವಾ ಅತಿಸಾರ ಕಡಿಮೆ ಮಾಡಲು ಔಷಧಿಗಳನ್ನು ನೀಡಲಾಗುತ್ತದೆ.
ನಿಯಮಿತ ವ್ಯಾಯಾಮ, ಸಮರ್ಪಕ ನಿದ್ರೆ ಮತ್ತು ಆರೋಗ್ಯಕರ ಆಹಾರ ಪದ್ಧತಿ IBS ನಿಯಂತ್ರಣಕ್ಕೆ ಸಹಾಯಕವಾಗುತ್ತದೆ.
ಕರುಳಿನ ಉರಿಯೂತದ ಕಾಯಿಲೆಗಳಿಗೆ (IBD – ಕ್ರೋನ್ಸ್ ರೋಗ ಮತ್ತು ಅಲ್ಸರೇಟಿವ್ ಕೊಲೈಟಿಸ್) ದೀರ್ಘಕಾಲದ ವಿಶೇಷ ಚಿಕಿತ್ಸೆಯ ಅಗತ್ಯವಿರುತ್ತದೆ. ಈ ಚಿಕಿತ್ಸೆಯು ಉರಿಯೂತ ಕಡಿಮೆ ಮಾಡುವ ಔಷಧಿಗಳು, ಆಹಾರ ನಿಯಂತ್ರಣ, ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಹಾಗೂ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯನ್ನು ಒಳಗೊಂಡಿರಬಹುದು. ಮುಖ್ಯವಾಗಿ, ಜೈವಿಕ ಚಿಕಿತ್ಸೆ (Biologics) ಮತ್ತು ಇಮ್ಯುನೊಸಪ್ರೆಸೆಂಟ್ಸ್ ಎಂಬ ವಿಶೇಷ ಔಷಧಿಗಳ ಮೂಲಕ ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸಲಾಗುತ್ತದೆ.
ಮನೆಮದ್ದು ಸಾಕೇ?
ಬಹಳ ಜನ “ಇದು ಸಾಮಾನ್ಯ” ಎಂದು ಮನೆಮದ್ದಿನಲ್ಲೇ ಕಾಲಹರಣ ಮಾಡುತ್ತಾರೆ. ಆದರೆ ದೀರ್ಘಕಾಲದ ಭೇದಿಯನ್ನು ನಿರ್ಲಕ್ಷ್ಯ ಮಾಡಿದರೆ ರಕ್ತಹೀನತೆ, ಪೋಷಕಾಂಶ ಕೊರತೆ ಮತ್ತು ಗಂಭೀರ ಕಾಯಿಲೆಗಳ ಸಾಧ್ಯತೆ ಇದೆ.
ತಡೆಯುವ ವಿಧಾನಗಳು
ಕೈ ತೊಳೆಯುವ ಅಭ್ಯಾಸ
ಶುದ್ಧ ನೀರು ಕುಡಿಯುವುದು
ಹಳೆಯ ಅಥವಾ ಬೀದಿ ಆಹಾರ ಕಡಿಮೆ ಮಾಡುವುದು
ಒತ್ತಡ ಕಡಿಮೆ ಮಾಡುವುದು
ನಿಯಮಿತ ವ್ಯಾಯಾಮ
ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು
ಕೊನೆಯ ಮಾತು
ದೀರ್ಘಕಾಲದ ಜಲಬಾಧೆ ಅಥವಾ ಭೇದಿ ಒಂದು ಸಾಮಾನ್ಯ ಸಮಸ್ಯೆಯಂತೆ ಕಾಣಬಹುದು. ಆದರೆ ಅದು ದೇಹದ ಒಳಗಿನ ಗಂಭೀರ ಕಾಯಿಲೆಯ ಸೂಚನೆಯಾಗಿರಬಹುದು. ಸಮಯಕ್ಕೆ ಸರಿಯಾಗಿ ತಜ್ಞರನ್ನು ಸಂಪರ್ಕಿಸಿ ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ.
ವಿಶ್ವ ಜೀರ್ಣಾಂಗ ಆರೋಗ್ಯ ದಿನದ ಈ ವರ್ಷದ ಸಂದೇಶವೂ ಇದೇ —
“Chronic Diarrhea: Don’t Flush the Signs Away”
ಅಂದರೆ, ದೀರ್ಘಕಾಲದ ಭೇದಿಯನ್ನು ಸಾಮಾನ್ಯವೆಂದು ನಿರ್ಲಕ್ಷಿಸದೆ ತಜ್ಞರ ಸಲಹೆ ಪಡೆಯುವುದು ಅಗತ್ಯ.
“ನಿರ್ಲಕ್ಷ್ಯಕ್ಕಿಂತ ಮುನ್ನೆಚ್ಚರಿಕೆ ಉತ್ತಮ” ಎಂಬ ಮಾತು ಇಲ್ಲಿ ಬಹಳ ಅನ್ವಯಿಸುತ್ತದೆ.
– ಡಾ. ಸತೀಶ್ ರಾವ್ ಎ.ಕೆ.
ಹಿರಿಯ ಜೀರ್ಣಾಂಗ ತಜ್ಞರು (Senior Consultant Gastroenterologist)
ಮಣಿಪಾಲ್ ಆಸ್ಪತ್ರೆ ಮೈಸೂರು
ಕಾರ್ಯದರ್ಶಿ, ಕರ್ನಾಟಕ ಗ್ಯಾಸ್ಟ್ರೋಎಂಟರಾಲಜಿ ಅಸೋಸಿಯೇಷನ್ (Karnataka Gastroenterology Association)