ಕೃಷ್ಣ ಶಿಲೆಯಲ್ಲಿ ಕುಳಿತಿರುವ ಶಂಕರಾಚಾರ್ಯರ ಪುತ್ಥಳಿ ನಿರ್ಮಿಸಿ ಮೈಸೂರಿನ ಶಿಲ್ಪಿ

ಮೈಸೂರು:5 ನವೆಂಬರ್ 2021

ನಂದಿನಿ

12 ಅಡಿ ಎತ್ತರ, 35 ಟನ್ ತೂಕದ ಕುಳಿತ ಭಂಗಿಯಲ್ಲಿರುವ ಶಂಕರಾಚಾರ್ಯರ ಪುತ್ಥಳಿಗೆ ಹೆಗ್ಗಡದೇವನಕೋಟೆಯಿಂದ 120 ಟನ್ ಕೃಷ್ಣ ಶಿಲೆ ಬಳಸಲಾಗಿದೆ.

2013ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ಪ್ರವಾಹದಲ್ಲಿ ದೇವಸ್ಥಾನ ಹೊರತುಪಡಿಸಿ ಬಹುತೇಕ ಎಲ್ಲಾ ಕೊಚ್ಚಿ ಹೋಗಿತ್ತು. ಅದರಲ್ಲಿ ಶ್ರೀ ಶಂಕರಾಚಾರ್ಯರ ಸಮಾಧಿ ಕೂಡ
ಧ್ವಂಸಗೊಂಡಿತ್ತು.

ಆದರೀಗ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದ ಮಹಾನ್ ದಾರ್ಶನಿಕರಾದ ಶಂಕರಾಚಾರ್ಯರ ಸಮಾಧಿಯನ್ನು ಪುನರುತ್ಥಾನಗೊಳಿಸುವುದರ ಜೊತೆಗೆ ಅವರ ಪ್ರತಿಮೆಯನ್ನು ಅನಾವರಣಗೊಳಿಸುತ್ತಿರುವುದು ಇತಿಹಾಸದ ಪುಟಗಳಲ್ಲಿ ದಾಖಲಿಸುವಂತಹದ್ದು.

ಚಾರ್ ಧಾಮ್ ಗಳಲ್ಲಿ ಒಂದಾದ ಕೇದಾರನಾಥಕ್ಕೆ ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಇಂತಹ ಪುರಾಣ ಪ್ರಸಿದ್ಧ ಸ್ಥಳದಲ್ಲಿ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ದಾರ್ಶನಿಕರ ಪ್ರತಿಮೆ ಸ್ಥಾಪಿಸಿ ಲೋಕಾರ್ಪಣೆ ಮಾಡಲಾಗಿದೆ.

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರವರು ಶಂಕರಾಚಾರ್ಯರ ಪುತ್ಥಳಿ ನಿರ್ಮಿಸಿದ್ದಾರೆ.ಅರುಣ್ ರವರು ಹುಟ್ಟಿದ್ದು 15 ಡಿಸೆಂಬರ್ 1983 ರಲ್ಲಿ.ಇವರು ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಬ್ಯಾಚುಲರ್ ಆಫ್ ಕಾಮರ್ಸ್ .ಕಲ್ಲು ,ಕಂಚು,ಫೈಬರ್ ನಲ್ಲಿ ತಮ್ಮ ಕಲೆ ಪ್ರದರ್ಶಿಸುತ್ತಾರೆ.ಅಂತೆಯೇ ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಿದ್ದಾರೆ.

ಎಂಟನೇ ಶತಮಾನದಲ್ಲಿ ಭಾರತದಲ್ಲಿ ಹಿಂದೂ ಧರ್ಮ ಸಂಕಷ್ಟದಲ್ಲಿತ್ತು. ಆಗ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿ ಉಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದವರು ಶಂಕರಾಚಾರ್ಯರು.

ವಾಹನಗಳ ಪರಿಕಲ್ಪನೆಯೇ ಇಲ್ಲದಂತ ಕಾಲದಲ್ಲಿ ದೇಶದಾದ್ಯಂತ ಕಾಲ್ನಡಿಗೆಯಲ್ಲಿ ಅದ್ವೈತ ತತ್ವ ಪ್ರಚಾರ ಮಾಡಿದ ಮಹಾತ್ಮರು. ಕೇವಲ ಮೂವತ್ತೆರಡನೇ ವಯಸ್ಸಿನಲ್ಲೇ ದೇಹತ್ಯಾಗ ಮಾಡಿದರು. ಆದರೆ ಅಲ್ಪಾಯಸ್ಸಿನಲ್ಲಿಯೇ ದೇಶದ ಜನತೆಗೆ ಅಪಾರ ಜ್ಞಾನವನ್ನು ನೀಡಿ ಹೋದವರು.

ಸಕಲ ವೇದಪಾರಂಗತರಾದ ಶಂಕರಾಚಾರ್ಯರು, ಘಟಾನುಘಟಿ ಪಂಡಿತರನ್ನು ಆಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಮಣಿಸಿ ಸರ್ವಜ್ಞ ಪೀಠವನ್ನೇರಿದವರು.

ಜ್ಞಾನ, ಧರ್ಮ ಪ್ರಸಾರಕ್ಕಾಗಿ ಹಾಗೂ ಜನತೆಯ ಒಳಿತಿಗಾಗಿ ದೇಶದ ನಾಲ್ಕು ಕಡೆಗಳಲ್ಲಿ ಪೀಠಗಳನ್ನು ಸ್ಥಾಪಿಸಿದವರು. ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರಿ ಹಾಗೂ ದಕ್ಷಿಣದಲ್ಲಿ ಶಾರದಾ ಪೀಠ ಸ್ಥಾಪಿಸಿದರು. ಈ ನಾಲ್ಕರಲ್ಲಿ ಶೃಂಗೇರಿಯ ಶಾರದಾ ಪೀಠ ನಮ್ಮ ರಾಜ್ಯದಲ್ಲಿರುವುದು ಹೆಮ್ಮೆಯ ಸಂಗತಿ.

ಎಂಟನೇ ವಯಸ್ಸಿನಲ್ಲಿ ನಾಲ್ಕೂ ವೇದಗಳನ್ನು ಕಲಿತು, ಹನ್ನೆರಡನೇ ವಯಸ್ಸಿಗೆ ಸರ್ವ ಶಾಸ್ತ್ರಗಳನ್ನು ಅರಿತು, ಹದಿನಾರನೇ ವಯಸ್ಸಿಗೆ ಭಾಷ್ಯವನ್ನು ಬರೆದು ಮೂವತ್ತೆರಡನೇ ವಯಸ್ಸಿಗೆ ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಇಹಲೋಕ ತ್ಯಜಿಸಿದವರು.

ಶಂಕರಾಚಾರ್ಯರು ಭೇಟಿ ನೀಡಿದ ಸ್ಥಳಗಳೆಲ್ಲ ಇದೀಗ ಆಧ್ಯಾತ್ಮಿಕ, ವಿದ್ಯಾ ಕೇಂದ್ರಗಳಾಗಿ ಜಗತ್ತಿಗೆ ಜ್ಞಾನ ಸಂಪತ್ತನ್ನು ಧಾರೆ ಎರೆಯುತ್ತಿವೆ. ಇಂತಹ ದೇವತಾ ಸ್ವರೂಪಿಯಾದ ಆಚಾರ್ಯರ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಸನ್ಮಾನ್ಯ ನರೇಂದ್ರ ಮೋದಿ ಮಾಡುತ್ತಿದ್ದಾರೆ. ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಸಕಲರು ಕೈಜೋಡಿಸಬೇಕು.

Leave a Reply

Your email address will not be published. Required fields are marked *