ಉತ್ತಮ ಪರಿಸರ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ:ಶಾಸಕ ಜಿಟಿಡಿ

ನಂದಿನಿ ಮೈಸೂರು

ಉತ್ತಮ ಪರಿಸರ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯ ಪಟ್ಟರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೂರ್ಗಳ್ಳಿ ಗ್ರಾಮದ ಬಿಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ನಗರಸಭೆ, ಹೂಟಗಳ್ಳಿ, ಅರಣ್ಯ ಇಲಾಖೆ, ಮೈಸೂರು ಪ್ರಾದೇಶಿಕ ವಲಯ, ಮೈಸೂರು, ಇವರ ವತಿಯಿಂದ ಏರ್ಪಡಿಸಿದ್ದ ವಿಶ್ವಪರಿಸರ ದಿನಾಚಣೆಯ ಅಂಗವಾಗಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪರಿಸರ ಹಾಳಾದಷ್ಟು ನಮ್ಮ ಆರೋಗ್ಯ ಹಾಳಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪರಿಸರವನ್ನು ನಾವು ನಾಶ ಮಾಡುತ್ತಾ ಸಾಗಿದ್ದೇವೆ. ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರು ಕಾರ್ಯನಿರ್ವಹಿಸಬೇಕು ಎಂದರು.

ವಾಯು ಮಾಲಿನ್ಯ, ಸಾಗರ ಮಾಲಿನ್ಯ, ಜಾಗತಿಕ ತಾಪಮಾನ ಹೆಚ್ಚಳ ಮತ್ತು ವಿಶ್ವಾದ್ಯಂತ ಹೆಚ್ಚುತ್ತಿರುವ ಜನಸಂಖ್ಯೆಯ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ, ಜತೆಯಲ್ಲಿ ಪರಿಸರ ಸಂರಕ್ಷಣೆಗೆ ಪಣತೊಡುವ ಉದ್ದೇಶದಿಂದ 1974ರಲ್ಲಿ ವಿಶ್ವ ಸಂಸ್ಥೆಯು ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಮರಗಿಡಗಳನ್ನು ನಮ್ಮ ಜೀವನದ ಒಂದು ಭಾಗವಾಗಿರಬೇಕು, ಸ್ವಚ್ಛತೆಯ ನೆಪದಲ್ಲಿ ಮನೆಯ ಸುತ್ತಮುತ್ತಲಿನ ಮರಗಿಡಗಳನ್ನು ಕಡಿದು ಮೈದಾನವಾಗಿಸುವುದು ಬೇಡ, ಮನೆಯ ಅಂಗಳದಲ್ಲಿರುವ ಮರಗಳನ್ನು ಉಳಿಸಿಕೊಂಡು ಹೂದೋಟ ಅಥವ ಹಿಂದಿನ ಕಾಲದಲ್ಲಿ ಇದ್ದ ಹಾಗೆ ಕೈತೋಟಗಳನ್ನು ನಿರ್ಮಿಸಿಕೊಂಡು ಉತ್ತಮವಾದ ತರಕಾರಿಗಳನ್ನು ಬೆಳೆದು, ಪ್ರತಿದಿನ ಮನೆಗಳಲ್ಲಿ ಬಳಸುವಂತಾಗಲಿ ಎಂದು ಸಲಹೆ ನೀಡಿದರು.

ಈ ಬಾರಿ ವಿಶ್ವ ಪರಿಸರ ದಿನಾಚರಣೆಯನ್ನು ಪ್ಲಾಸ್ಟಿಕ್ ಮಾಲಿನ್ಯವನ್ನು ಅಳಿಸಿ, ಹಸಿರನ್ನು ಉಳಿಸಿ ಎಂಬ ಧೇಯೆಯೊಂದಿಗೆ ಆಚರಣೆ ಮಾಡಲಾಗುತ್ತದೆ. ಪರಿಸರ ಹಾನಿ ಎಂದಾಕ್ಷಣ ನೆನಪಿಗೆ ಬರುವುದು ಪ್ಲಾಸ್ಟಿಕ್, ಪ್ಲಾಸ್ಟಿಕ್ ಬಳಕೆಯನ್ನು ತೆಜಿಸುವ ಬಗ್ಗೆ ಎಲ್ಲರು ದೃಢ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಬಹಳ ಸಮಯದಿಂದ ಮಾನವರು ಪರಿಸರ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಹಲವು ಕಡೆಗಳಲ್ಲಿ ಪರಿಸರ ನಾಶವಾಗುತ್ತಿದೆ. ನೈಸರ್ಗಿಕ ಪರಿಸರ ವ್ಯವಸ್ಥೆಗಳು ಮತ್ತು ಅವುಗಳ ಜೀವ ವೈವಿಧ್ಯತೆಯೊಂದಿಗೆ ನಾವು ಈಗ ಜೀವಂತ ಪ್ರಪಂಚ ದೊಂದಿಗಿನ ನಮ್ಮ ಸಂಬಂಧ ವನ್ನು ಮೂಲಭೂತವಾಗಿ ಪುನರ್ವಿಮರ್ಶಿಸಬೇಕು ಮತ್ತು ಅದರ ಪುನಃಸ್ಥಾಪನೆಗೆ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ಡಿ.ಸಿ.ಎಫ್.ಬಸವರಾಜು, ಎ.ಸಿ.ಎಫ್. ಲಕ್ಷ್ಮೀ ಕಾಂತ, ಆರ್.ಎಫ್.ಓ. ಸುರೇಂದ್ರ, ನಗರಸಭೆ ಪೌರಾಯುಕ್ತ ನರಸಿಂಹಮೂರ್ತಿ, ಪರಿಸರ ವಾದಿ ನಾಣಯ್ಯ, ಕೂರ್ಗಳ್ಳಿ ಮುಖಂಡರಾದ ನಂಜುಂಡೇಗೌಡ, ರಾಮಣ್ಣ, ರಾಣಿ ಸತೀಶ್, ಸತೀಶ್ ಬಾಬು, ಜಿಮ್ ರಾಮು, ಮಾದೇಶ್, ಮದ್ದೇಗೌಡ, ಬೋರೇಗೌಡ, ಕುಮಾರ್, ಸಿದ್ದರಾಮು, ದೇವೇಗೌಡ (ದೊಡ್ಡಣ್ಣ), ಶಿವರಾಮು, ಸೋಮಶೇಖರ್, ದೇವು, ನಾಗಣ್ಣ, ವಸಂತಕುಮಾರ್, ಮಂಜು, ಭಕ್ತವತ್ಸಲ, ಕೃಷ್ಣಪ್ಪ, ಕುಮಾರ್, ರವಿ ಜೆ., ನಗರಸಭೆಯ ಅಧಿಕಾರಿಗಳು ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *