ನಂದಿನಿ ಮನುಪ್ರಸಾದ್ ನಾಯಕ್
ಮೈಸೂರು, ಮೇ 31: ಸರ್ವಕಲಾ ಸೇವಾ ಟ್ರಸ್ಟ್ ಹಾಗೂ ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ (ರಿ.) ಮೈಸೂರು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಸುಗ್ಗಿಯರ ಕಲೋತ್ಸವ ಗಾಯನ ಸೀಸನ್–3 ಕಾರ್ಯಕ್ರಮವು ನಗರದ ಹೂಟಗಳ್ಳಿಯ ಹೌಸಿಂಗ್ ಬೋರ್ಡ್ನ ಶ್ರೀ ಅನಂತೇಶ್ವರ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವು ಪರಮಪೂಜ್ಯ ಶ್ರೀನಿವಾಸನ್ ಎನ್. ಸ್ವಾಮೀಜಿಯವರು ಹಾಗೂ ಶ್ರೀ ಶ್ರೀ ರಮಾನಂದ ಗುರೂಜಿಯವರು ಅವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಇಬ್ಬರೂ ಆಧ್ಯಾತ್ಮಿಕ ಮುಖಂಡರು, ಸಂಗೀತ ಮತ್ತು ಕಲೆಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮ ಶ್ಲಾಘನೀಯ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿ.ಟಿ. ದೇವೇಗೌಡ ಅವರು ಮಾತನಾಡಿ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಸಮಾಜದ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿವೆ ಎಂದು ಹೇಳಿದರು.
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಮಂಗಳಗೌರಿ ಮುರುಳೀಧರ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ತಮ್ಮ ಹಾಸ್ಯಮಯ ಮಾತುಗಳ ಮೂಲಕ ಸಭಿಕರನ್ನು ರಂಜಿಸಿದರು ಹಾಗೂ ಯುವ ಕಲಾವಿದರಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.
ಕಾರ್ಯಕ್ರಮದ ಮುಖ್ಯ ಭಾಗವಾಗಿ ರಕ್ತದಾನಿ ಮಂಜು ರವರು ಕನಸು ಕಂಡಂತ ಚಿರಜೀವ ಸೇವಾ ಟ್ರಸ್ಟ್ ಮತ್ತು ನೀಮಾ ಲೋಬೋ ಮೇಡಂ ರವರ ಸಪ್ತಸ್ವರ ಮೆಲೋಡಿಸ್ ಪೋಸ್ಟರ್ ಅನ್ನು ಶಾಸಕರು ಮತ್ತು ಗಣ್ಯರು ಉದ್ಘಾಟನೆ ಮಾಡಿದರು.
ಬಳಕ ರಕ್ತದಾನಿ ಮಂಜು ರವರ ಮುಂದಿನ ಬೆಳವಣಿಗೆಗೆ ಎಲ್ಲರೂ ಆಶೀರ್ವಾದ ಮಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಗಾಯನ ಪ್ರತಿಭೆಗಳು ತಮ್ಮ ಸುಮಧುರ ಗಾಯನದ ಮೂಲಕ ನೆರೆದಿದ್ದ ಪ್ರೇಕ್ಷಕರ ಮನಗೆದ್ದರು. ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ ಹಾಗೂ ಚಲನಚಿತ್ರ ಗೀತೆಗಳ ಪ್ರಸ್ತುತಿಯು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಸಮಾರಂಭದಲ್ಲಿ ಮಹಾದೇವಸ್ವಾಮಿ, ದಾಸೇಗೌಡ, ಸುಧಾಮಣಿ, ಯಮನ ಹೆಚ್.ಎಲ್., ನಿಮು ಲೋಬೋ, ಚಂದ್ರಿಕಾ ಸುರೇಶ್, ಭಾಗ್ಯ ತಿಮ್ಮರಾಜೇಗೌಡ, ಭಾಗ್ಯ ಲೋಕೆಶ್, ನಾಗರತ್ನ ರಮೇಶ್, ಭಾಗ್ಯ ಮೋಹನ್, ಡಾ. ನಾಗರಾಜು ವಿ. ಭೈರಿ, ಶ್ರೀನಿವಾಸ್ ರಾವ್, ಎಂ.ಜೆ. ಕಿರಣ್ ಗೌಡ, ಪುರುಷೋತ್ತಮ ಕೆ.ಎಸ್., ಬಿ.ಪಿ. ಸಂದೇಶ್, ವಿ.ಕೆ. ದಿವ್ಯಾ, ರಾಜಶೇಖರ್, ಯಾದವ್ ಹರೀಶ್, ದಿನೇಶ್, ಪ್ರಶಾಂತ್ ಅರುಣ್ಪುರ, ವಿಕ್ರಂ ಅಯ್ಯಂಗಾರ್, ನಾಗೇಂದ್ರ, ಪ್ರದೀಪ್ ಕುಮಾರ್, ಗಿರೀಶ್ ಎಸ್.ಆರ್., ಲತಾ ದೊರೆಸ್ವಾಮಿ, ಶೈಲಜಾ ವಿ., ಭೈರ ಹೆಚ್.ಆರ್., ಡಾ. ಲಯನ್ ಕುಮಾರ್, ಸುರೇಶ್ ಹಾಗೂ ಸವಿತಾ ಎಸ್. ಗೌಡ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಗಾಯನ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭೆಗಳಿಗೆ ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು. ನೂರಾರು ಕಲಾಭಿಮಾನಿಗಳು, ಕಲಾವಿದರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಈ ಕಲೋತ್ಸವವು ಯಶಸ್ವಿಯಾಗಿ ಸಂಪನ್ನಗೊಂಡು ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆಯಾಯಿತು.

ಶ್ರೀಮತಿ ನೀಮಾ ಲೋಬೋ, ಡಾ. ಜೋಸೆಫ್ ಲೋಬೋ, ಶ್ರೀ ಯಾದವ್ ಹರೀಶ್ ಹಾಗೂ ಪಿಜಿಆರ್ ಎಸ್ಎಸ್ ನ ರಕ್ತದಾನಿ ಮಂಜು ರವರುಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು.