ಮೊದಲ ವಾರ್ಮ್ ಪೂಲ್ ಉದ್ಘಾಟಿಸಿದ ಶಾಸಕ ಟಿ.ಎಸ್. ಶ್ರೀವತ್ಸ

ನಂದಿನಿ ಮೈಸೂರು

*ಮೊದಲ ವಾರ್ಮ್ ಪೂಲ್ ಉದ್ಘಾಟಿಸಿದ ಶಾಸಕ ಟಿ.ಎಸ್. ಶ್ರೀವತ್ಸ .

-ಲಲಿತಾದ್ರಿಪುರದ ಕೆಬಿಎಲ್ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿರುವ ಈಜುಕೊಳ

ಮೈಸೂರಿನ
ಲಲಿತಾದ್ರಿಪುರದ ಕೆಬಿಎಲ್ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ನಗರದ ಮೊದಲ ವಾರ್ಮ್ ಈಜುಕೊಳವನ್ನು ಶಾಸಕ ಟಿ.ಎಸ್. ಶ್ರೀವತ್ಸ ಉದ್ಘಾಟಿಸಿದರು.
ಕೆಬಿಎಲ್ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಶಾಲೆ ಹಾಗೂ ಎಂಎಎಸ್‌ಪಿ ಅಕ್ವಾಟಿಕ್ಸ್ ಕ್ಲಬ್ ಸಹಯೋಗದಲ್ಲಿ ಸೋಮವಾರ ಶಾಲೆಯ ಆವರಣದಲ್ಲಿರುವ ಈಜುಕೊಳದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀವತ್ಸ ಸ್ಪರ್ಧಿಗಳಿಗೆ ಈಜಲು ಸೂಚನೆ ನೀಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿ, ನಗರದಲ್ಲಿ 10 ರಿಂದ 15 ಕಡೆ ಈಜುಕೊಳಗಳಿದ್ದು ಲಲಿತಾದ್ರಿಪುರದ ಕೆಬಿಎಲ್ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಿರ್ಮಿಸಲಾಗಿರುವ ಈ ಸುಸಜ್ಜಿತ ಈಜುಕೊಳವನ್ನು ಸ್ಪರ್ಧಿಗಳು, ಹೊಸದಾಗಿ ಈಜು ಕಲಿಯುವವರು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವವರಿಗೆ ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಲಲಿತಾದ್ರಿಪುರ ಭಾಗಕ್ಕೆ ಯಾವುದೇ ಈಜುಕೊಳವಿರಲಿಲ್ಲ. ಹಾಗಾಗಿ ಈ ಭಾಗದ ಈಜುಪ್ರಿಯರು ನಗರ ಕೇಂದ್ರದಲ್ಲಿರುವ ಈಜುಕೊಳಗಳಿಗೆ ಆಗಮಿಸುತ್ತಿದ್ದರು. ಇದೀಗ ಹೊಸ ಕೊಳ ನಿರ್ಮಾಣದಿಂದ ಆ ಕೊರತೆ ದೂರವಾಗಲಿದೆ. ಎಲ್ಲರೂ ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ದಿವಂಗತ ಆರ್. ಗುಂಡೂರಾವ್ ಅವರು ಒಮ್ಮೆ ಸ್ವತಃ ಈಜುವ ಮೂಲಕ ಈಜುಕೊಳವನ್ನು ಉದ್ಘಾಟಿಸಿದ್ದರು. ಈ ಕ್ರೀಡೆಯ ಮಹತ್ವವನ್ನು ಅರಿತಿದ್ದ ಅವರು ಹೆಚ್ಚು ಮಂದಿ ಅದರ ಪ್ರಯೋಜನ ಪಡೆಯಲೆಂದು ಪ್ರೇರೇಪಿಸಲು ತಾವೇ ಈಜಿ ತೋರಿಸಿದ್ದು ಮಾದರಿಯಾಗಿತ್ತು ಎಂದು ಸ್ಮರಿಸಿದರು.

ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಈ.ಸಿ. ನಿಂಗರಾಜ್ ಗೌಡ ಅವರು ಮಾತನಾಡಿ, ನಮ್ಮ ಊರಿನಲ್ಲಿ ನಮ್ಮ ಸಂಬಂಧಿಯೊಬ್ಬರು ಈಜಲು ಹೋಗಿ ತೀರಿಕೊಂಡರು. ಆಗಿನಿಂದ ನಮ್ಮ ಕುಟುಂಬದವರು ಈಜಲು ಬಿಡುತ್ತಿರಲಿಲ್ಲ. ಹಾಗಾಗಿ ನಾವು ಈಜು ಕಲಿಯಲು ಸಾಧ್ಯವಾಗಲಿಲ್ಲ. ಆದರೆ ಈಜು ಒಂದು ಆತ್ಮರಕ್ಷಣೆ ಕಲೆಯಲ್ಲದೇ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕಾದ ಕ್ರೀಡೆಯಾಗಿರುವ ಕಾರಣ ಇಂತಹ ಅಪವಾದಗಳನ್ನು ಬದಿಗಿಟ್ಟು ಮಾರ್ಗದರ್ಶಕರೊಬ್ಬರ ನೇತೃತ್ವದಲ್ಲಿ ಈಜು ಕಲಿಯಬೇಕು ಎಂದು ಸಲಹೆ ನೀಡಿದರು.

ಕೆಬಿಎಲ್ ಇಂಟರ್ ನ್ಯಾಷನಲ್ ಶಾಲೆಯವರು ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅಥ್ಲೇಟಿಕ್ಸ್, ಚೆಸ್, ಕರಾಟೆ, ಭರತನಾಟ್ಯ, ಸಂಗೀತ ಮತ್ತು ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ಓದಿನ ಜೊತೆಯೇ ಹೇಳಿ ಕೊಡುತ್ತೀದ್ದಾರೆ. ಅದರ ಜೊತೆಗೆ ಸುಸಜ್ಜಿತ ಈಜುಕೋಳವನ್ನು ನಿರ್ಮಿಸಿರುವುದಕ್ಕೆ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

ಡಾ.ಈ.ಸಿ.ನಿಂಗರಾಜ್ ಗೌಡ ಮಾತನಾಡಿ ಈಜು ಕಲಿಯುವುದರಿಂದ ದೈಹಿಕ ಆರೋಗ್ಯ, ಫಿಟ್ನೆಸ್ ಜೊತೆ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ. ಈಜುವುದು ಒಂದು ಉತ್ತಮ ಶಾರೀರಿಕ ವ್ಯಾಯಾಮವಾಗಿದ್ದು, ಹೃದಯಕ್ಕೆ ಆರೋಗ್ಯಕರವಾಗಿರುತ್ತದೆ. ಇದು ಸಂಪೂರ್ಣ ಶರೀರದ ವ್ಯಾಯಾಮವಾಗಿದ್ದು, ತೂಕ ಕಳಿಸಲು ಸಹಾಯಕವಾಗುತ್ತದೆ. ನೀರಿನಲ್ಲಿ ಈಜುವುದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಜಲಚಿಕಿತ್ಸೆಯ ಭಾಗವಾಗಿ, ಇದು ಮೆದುಳಿನ ಶಾಂತತೆಗೆ ಸಹಾಯ ಮಾಡುತ್ತದೆ. ಈಜುಕೋಳಗಳು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯಲು ಉತ್ತಮ ಸ್ಥಳವಾಗಿವೆ. ಈಜುವುದು ಒಂದು ಜೀವನಾವಶ್ಯಕ ಕೌಶಲ್ಯವಾಗಿದ್ದು, ನೀರಿನ ಅಪಾಯಗಳು ಎದುರಾದಾಗ ಸಹಾಯ ಮಾಡುತ್ತದೆ. ವಿಶೇಷವಾಗಿ ಮಕ್ಕಳಿಗೆ ಈಜುವ ಕಲಿಕೆ ಅಗತ್ಯವಾಗಿದ್ದು, ನೀರಿನಲ್ಲಿ ಸುರಕ್ಷಿತವಾಗಿ ಇರುತ್ತಾರೆ ಎಂದು ತಿಳಿಸಿದರು.
ಮೈಸೂರಿನಲ್ಲೂ ಮಹಾನಗರಪಾಲಿಕೆವತಿಯಿಂದ ಈಜಕೋಳವನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಶಾಸಕರಾದ ಟಿ.ಎಸ್.ಶ್ರೀವತ್ಸರವರಲ್ಲಿ ಡಾ.ಈ.ಸಿ.ನಿಂಗರಾಜ್ ಗೌಡರವರು ಮನವಿ ಮಾಡಿದರು.

ಮೈಸೂರು ವಿವಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಿ.ಎಸ್. ಗುರು ಅವರು ಮಾತನಾಡಿ, ಈಜು ದೇಹದ ಎಲ್ಲಾ ಅಂಗಾಂಗಗಳಿಗೂ ವ್ಯಾಯಾಮವನ್ನು ನೀಡುವ ಕ್ರೀಡೆಯಾಗಿದೆ. ಹಾಗಾಗಿ ನಾನು ವಾರಕ್ಕೊಮ್ಮೆ ಈಜುತ್ತೇನೆ. ಮಕ್ಕಳು ಬಹುಮುಖ ಪ್ರತಿಭೆಗಳಾಗಿ ಹಾಗೂ ಆರೋಗ್ಯವಂತರಾಗಿ ಬೆಳೆಯಲು ಈಜು ಅನುಕೂಲವಾಗುತ್ತದೆ ಎಂದರು.
ಚಲನಚಿತ್ರನಟ ಶಂಕರ್ ಅಶ್ವಥ್ ಮಾತನಾಡಿ, ಈಜಿನಿಂದ ಆಕರ್ಷಿತನಾಗಿ ನನ್ನ ಮಗನನ್ನು ಈಜು ಪಟುವಾಗಿ ರೂಪಿಸಿದೆ. ಆತನಿಂದ ತರಬೇತಿ ಪಡೆದು ಸಾಕಷ್ಟು ಮಂದಿ ಈಜು ಕಲಿಯುವಂತಾಗಿದೆ. ಈ ಕ್ರೀಡೆಯಿಂದ ನಮ್ಮ ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದರು.

ವೈ.ಎಸ್. ಪ್ರಾಪರ್ಟಿಸ್‌ನ ಕೆ.ಎನ್. ಸಂತೋಷ್, ಕೆ.ಎಚ್. ಕಿರಣ್, ಸೇಪ್ ವೀಲ್ ಟ್ರಾವೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಪ್ರಶಾಂತ್, ಕೆಬಿಎಲ್ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಶಾಲೆ ಪ್ರಾಂಶುಪಾಲೆ ಡಾ.ದೀಪ್ತಿ ಚತುರ್ವೇದಿ, ಡಾ.ಸುಮಲಿನಿ ಬಿ ಸ್ವಾಮಿ, ಮತ್ತೀತರರು ಉಪಸ್ಥಿತರಿದ್ದರು.
——-

Leave a Reply

Your email address will not be published. Required fields are marked *