ನಂದಿನಿ ಮನುಪ್ರಸಾದ್ ನಾಯಕ್
ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ದೊಡ್ಡ ಆಸ್ತಿ ಮಾಡಿದಂತೆ: ಶಾಸಕ ಜಿಟಿಡಿ
ಮೈಸೂರು:ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ಪೋಷಕರು ದೊಡ್ಡ ಆಸ್ತಿ ಮಾಡಿದಂತಾಗಲಿದೆ. ಏನೇ ಆಸ್ತಿ-ಪಾಸ್ತಿ ಹೊಂದಿದ್ದರೂಶಿಕ್ಷಣ ಕಲಿಯದಿದ್ದರೆ ಸ್ವತಂತ್ರವಾಗಿ ಬದುಕು ಸಾಗಿಸಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶದ ಮಕ್ಕಳು ಉನ್ನತ ವ್ಯಾಸಂಗ ಪಡೆದು ಉತ್ತಮ ಪ್ರಜೆಗಳಾಗಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.ಮೈಸೂರಿನ ಹೂಟಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಮೈಸೂರು ಗ್ರಾಮಾಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ ೨೦೨೫-೨೬ನೇ ಸಾಲಿನ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣೆ ಹಾಗೂ ಮೌಲ್ಯಾಂಕನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಪೋಷಕರು ಎಷ್ಟೇ ಕಷ್ಟವಾದರೂ ಮಕ್ಕಳ ಆರೋಗ್ಯವನ್ನು ಕಾಪಾಡುವ ಜತೆಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಣವೇ ಮಕ್ಕಳಿಗೆ ದೊಡ್ಡ ಆಸ್ತಿ. ಡಾ.ಬಿ.ಆರ್.ಅಂಬೇಡ್ಕರ್,ಜ್ಯೋತಿಬಾಪುಲೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಇಂದು ಶಿಕ್ಷಣ ಕಲಿಯದಿದ್ದರೆ ಸಮಸ್ಯೆಯಾಗಲಿದೆ. ಶಿಕ್ಷಣ ಅಂದರೆ ಓದು ಬರೆಯುವುದು ಅಲ್ಲ. ಸಂಸ್ಕಾರಯುತಶಿಕ್ಷಣ ಪಡೆದು ಉತ್ತಮ ನಾಗರಿಕರಾಗಬೇಕು ಎಂದು ಹೇಳಿದರು.ವಿಶೇಚಚೇತನ ಮಕ್ಕಳಿಗೂ ಆರೋಗ್ಯ ಮತ್ತು ಶಿಕ್ಷಣ ಕೊಡಿಸಲು ಗಮನಹರಿಸಬೇಕು.ಅಂಗವೈಕಲ್ಯ ಹಿನ್ನಡೆ ಎನ್ನುವ ಭಾವನೆ ಇಟ್ಟುಕೊಳ್ಳದೆ ಮುನ್ನೆಡೆಯಂತೆ ಕಾಣಬೇಕು. ವಿಶೇಷಚೇತನರ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ದೇವರು ಕೊಟ್ಟ ವರವೆಂದು ನೋಡಿಕೊಳ್ಳುತ್ತಾರೆ. ವಿಶೇಷಚೇತನರಿಗೆ ಅನುಕಂಪ ಮುಖ್ಯವಲ್ಲ. ಉತ್ಸಾಹ ತುಂಬಿ ವಿದ್ಯಾವಂತರನ್ನಾಗಿ ಮಾಡಿದರೆ ಸ್ವಯಂಬಲದಿಂದ ಬದುಕುತ್ತಾರೆ. ಎಲ್ಲರಂತೆ ಬದುಕು ಕಟ್ಟಿಕೊಳ್ಳಲಿದ್ದಾರೆ. ಸರ್ಕಾರ ಕೂಡ ವಿಶೇಷಚೇತನರಿಗೆ ಹಲವಾರು ಯೋಜನೆಗಳನ್ನು ರೂಪಿಸಿರುವುದರಿಂದ ಪೋಷಕರು ಬಳಸಿಕೊಳ್ಳಬೇಕು ಎಂದರು. ಮೈಸೂರು ತಾಲ್ಲೂಕಿಗೆ ಮೂರು ಕರ್ನಾಟಕ ಪಬ್ಲಿಕ್ ಶಾಲೆಯು ಮಂಜೂರಾಗಿದ್ದು, ಅದರಲ್ಲಿ ಹೂಟಗಳ್ಳಿಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನು ಸೇರಿಸಲಾಗಿದೆ. ಶಿಕ್ಷಕರು ಶ್ರಮಪಟ್ಟು ಕೆಲಸ ಮಾಡಿದರೆ ಉತ್ತಮ ಸ್ಥಾನ ಪಡೆಯಬಹುದು. ಹೂಟಗಳ್ಳಿ ಶಾಲೆಯು ರಾಜ್ಯಕ್ಕೆ ಪ್ರಥಮ ಸ್ಥಾನಕ್ಕೆ ಬರಬೇಕು ಎಂದು ಕರೆ ನೀಡಿದರು. ಶಿಕ್ಷಕರು ತಮ್ಮ ಮನೆಯಂತೆ ಶಾಲೆಯನ್ನು ನೋಡಿಕೊಳ್ಳಬೇಕು.ಬಡವರು,ಮಧ್ಯಮ ವರ್ಗಗಳ ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಯನ್ನೇ ಅವಲಂಬಿಸುತ್ತಾರೆ.ಖಾಸಗಿ ಶಾಲೆಗಳಂತೆ ಪಾಠಪ್ರವಚನ ಮಾಡಿ ಫಲಿತಾಂಶ ಜಾಸ್ತಿ ಬರುವಂತೆ ಮಾಡಬೇಕು. ಪ್ರತಿಯೊಬ್ಬ ಶಿಕ್ಷಕರು ಇದನ್ನು ಅರಿತುಕೊಳ್ಳಬೇಕು ಎಂದರು. ಮಕ್ಕಳ ಆರೋಗ್ಯ ಚೆನ್ನಾಗಿದ್ದರೆ ಓದುತ್ತಾರೆ.ಆರೋಗ್ಯ ಶಿಬಿರ ಏರ್ಪಡಿಸಿರುವುದರಿಂದ ಮಕ್ಕಳ ದೈಹಿಕ ಕ್ಷಮತೆ ಗೊತ್ತಾಗಲಿದೆ ಎಂಧರು. ಜೆ.ಕೆ.ಟೈರ್ಸ್ ವತಿಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ಹೂಟಗಳ್ಳಿ ಗ್ರಾಮದ ಮುಖಂಡ ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲೇಗೌಡ, ಮುಖ್ಯ ಶಿಕ್ಷಕ ದುಂಡಯ್ಯ, ವೈದ್ಯ ಚೇತನ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಸಂಗೀತ, ಎಸ್ಡಿಎಂಸಿ ಅಧ್ಯಕ್ಷ ಲೋಕೇಶ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸತೀಶ್, ಜೆ.ಕೆ.ಟೈರ್ಸ್ನ ಜಗದೀಶ್ ಮತ್ತಿತರರು ಹಾಜರಿದ್ದರು.
ಮೈಸೂರಿನ ಹೂಟಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಮೈಸೂರು ಗ್ರಾಮಾಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ ೨೦೨೫-೨೬ನೇ ಸಾಲಿನ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣೆ ಹಾಗೂ ಮೌಲ್ಯಾಂಕನ ಶಿಬಿರವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು.